ಮಂಗಳೂರು : ನಗರದ ಪದವು ಕುಲಶೇಖರದಲ್ಲಿ ಹಿಂದು ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಶನೈಶ್ವರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಏಪ್ರಿಲ್ 18 ರಿಂದ 24 ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಅವರು ದೇವಾಲಯದ ಆವರಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಹಿಂದೂ ಯುವಸೇನೆ ಪದವು ಶಾಖೆಯ ಧಾರ್ಮಿಕ ವಿಭಾಗವಾಗಿ ಕಳೆದ ಎರಡೂವರೆ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಶನೈಶ್ಚರ ಪೂಜಾ ಸಮಿತಿ (ರಿ.) ಶ್ರೀ ಸಗ್ರಹ ಮಖ ಶನೈಶ್ಚರ ಮಹಾಯಾಗವನ್ನು ಬಾಳಂಭಟ್ ಮನೆತನದ ವೇದಮೂರ್ತಿ ನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ 2000 ಹಾಗೂ 2018ರಲ್ಲಿ ನಡೆಸಲಾಗಿತ್ತು. ಶ್ರೀ ಸಗ್ರಹ ಮಖ ಶನೈಶ್ಚರ ಮಹಾಯಾಗವು 7 ದಿನಗಳ ಪರ್ಯಂತ ನಡೆದಿದ್ದು, ಧಾರ್ಮಿಕ ವಲಯದಲ್ಲಿ ಚರಿತ್ರೆ ನಿರ್ಮಿಸಿದ ಕಾರ್ಯಕ್ರಮವಾಗಿ ದಾಖಲಾಗಿದೆ. ಮಂಗಳೂರಿನ ಕುಲಶೇಖರದ ಪದವು ಮೇಗಿನಮನೆ ಬಳಿ 2010ರಲ್ಲಿ 600 ಚ.ಅಡಿಯಲ್ಲಿ ಶ್ರೀ ಶನೈಶ್ಚರ ಪೂಜಾ ಮಂದಿರವನ್ನು ನಿರ್ಮಿಸಿ ಶ್ರೀ ಶನಿದೇವರ ಆರಾಧನೆಯನ್ನು ನಡೆಸಲಾಗುತ್ತಿತ್ತು. 2023ರಲ್ಲಿ ಶ್ರೀ ಶನೈಶ್ವರ ದೇವಸ್ಥಾನ ನಿರ್ಮಾಣ ಸಮಿತಿಯನ್ನು ರಚಿಸಿ, 10 ಸೆಂಟ್ಸ್ ಸ್ಥಳವನ್ನು ಖರೀದಿಸಿ, ನೂತನ ಶಿಲಾಮಯ ಶ್ರೀ ಶನೈಶ್ಚರ ದೇವಸ್ಥಾನದ ಶಂಕುಸ್ಥಾಪನೆ ನಡೆಸಲಾಗಿತ್ತು.
ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಶ್ರೀ ಶನೈಶ್ವರ ದೇವಸ್ಥಾನದಲ್ಲಿ ನವಗ್ರಹ ಸಹಿತ ಶ್ರೀ ಶನೈಶ್ಚರ, ಶ್ರೀ ಮಹಾಗಣಪತಿ ಹಾಗೂ ಶ್ರೀ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಲಾಗುವುದು.
ಎಪ್ರಿಲ್ 18, ಶನಿವಾರದಂದು ಸಾಮೂಹಿಕ ಪ್ರಾರ್ಥನೆಯಿಂದ ಮೊದಲ್ಗೊಂಡು 108 ಕಾಯಿ ಗಣಯಾಗ, ರುದ್ರಯಾಗ, ಲಕ್ಷ್ಮೀನಾರಾಯಣ ಪ್ರಧಾನ ಹೋಮ ಎಪ್ರಿಲ್ 22ರ ತನಕ ನಡೆಯಲಿದೆ. ಎಪ್ರಿಲ್ 23, ಗುರುವಾರದಂದು ಗಣಪತಿ, ದುರ್ಗಾ, ನವಗ್ರಹ ಸಹಿತ ಶ್ರೀ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ ಮತ್ತು ಶ್ರೀ ದೇವರಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕವು ಜರಗಲಿದೆ. ಎಪ್ರಿಲ್ 24ರಂದು ಚಂಡಿಕಾಯಾಗ ಹಾಗೂ ಸಗ್ರಹ ಶನೈಶ್ವರ ಮಹಾಯಾಗ ಸಂಪನ್ನಗೊಳ್ಳಲಿದೆ. ಪ್ರತಿದಿನ ವಿವಿಧ ಮಂಡಳಿಗಳಿಂದ ಭಜನೆ, ಅನ್ನಸಂತರ್ಪಣೆ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.

ಶನಿದೇವರ ಮಹಾತ್ಮಯ ಪುಣ್ಯಕಥಾನಕವನ್ನು “ಛಾಯಾನಂದನ” ಯಕ್ಷಗಾನ ಬಯಲಾಟದ ಮೂಲಕ – ಶ್ರೀ ಪಾವಂಜೆ ಮೇಳದವರು, ಎಪ್ರಿಲ್ 21ರಂದು ಹಾಗೂ ಶ್ರೀ ಲಲಿತೆ ಕಲಾವಿದರು ಎಪ್ರಿಲ್ 23ರಂದು “ಶನಿ ಮಹಾತ್ಮ” “ತುಳು ಪೌರಾಣಿಕ ನಾಟಕದ ಮೂಲಕ ಪ್ರದರ್ಶಿಸಲಿರುವರು. ಸೌದಾಮಿನಿ ರಾವ್ ಕಟಪಾಡಿ ಮತ್ತು ಬಳಗದವರಿಂದ “ನೃತ್ಯರಂಜಿನಿ”, ವಿಧಾತ್ರಿ ಕಲಾವಿದೆರ್ ಕುಡ್ಲ (ರಿ) ಇವರಿಂದ “ಜೈ ಹನುಮಾನ್” ಸಿನಿ ನಾಟಕ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಜಗದೀಶ್ ಕದ್ರಿಯವರ ಸಂಯೋಜನೆಯಲ್ಲಿ ಕದ್ರಿ ಈವೆಂಟ್ಸ್ ಪ್ರಸ್ತುತಿಯ “ಭಕ್ತಿಸಂಗೀತ ಲಹರಿ” ಮೊದಲಾದ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹೊರೆಕಾಣಿಕೆ ಮೆರವಣಿಗೆ : ಎಪ್ರಿಲ್ 19, ಆದಿತ್ಯವಾರ ಬೆಳಿಗ್ಗೆ 9.00 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಶರವು ರಾಘವೇಂದ್ರ ಶಾಸ್ತ್ರಿಗಳು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನೂತನ ಶಿಲಾಬಿಂಬಗಳೊಂದಿಗೆ ದೇವಸ್ಥಾನದ ನಿತ್ಯೋಪಯೋಗಿ ಪರಿಕರಗಳು, ಬ್ರಹ್ಮಕಲಶಕ್ಕೆ ಬೇಕಾದ ಪರಿಕರಗಳು, ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗಲಿದೆ. ಹಿಂದೂ ಯುವಸೇನೆಯ ವಿವಿಧ ಶಾಖೆಗಳು, ಪರಿಸರದ ಸಂಘ ಸಂಸ್ಥೆಗಳು, ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಂದ ಹೊರೆಕಾಣಿಕೆ ವಾಹನಗಳು ಪಾಲ್ಗೊಳ್ಳಲಿದೆ.
ಹಿಂದೂ ಯುವಸೇನೆಯ ಸಮಾವೇಶ : ಶಿವಾಜಿ ಮಂಟಪದಲ್ಲಿ ಪ್ರತಿದಿನ ಸಂಜೆ ಧರ್ಮಸಭೆ ನಡೆಯಲಿದ್ದು, ಎಪ್ರಿಲ್ 19 ಆದಿತ್ಯವಾರ ಹಿಂದೂ ಯುವಸೇನೆಯ ಸಮಾವೇಶವು ಜರಗಲಿದೆ. ಹಿಂದೂ ಯುವಸೇನೆಯ ಹಿರಿಯ ನಾಯಕರು, ವಿವಿಧ ಶಾಖೆಗಳ ಸ್ವಯಂಸೇವಕರು, ಧಾರ್ಮಿಕ ನೇತಾರರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂದೆ ಶ್ರೀ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಇನ್ನೂ 20 ಸೆಂಟ್ಸ್ ಜಮೀನಿನ ಅವಶ್ಯಕತೆಯಿದ್ದು, ಭೂ ದಾನ ಯೋಜನೆಯ ಮೂಲಕ ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಮಂಗಳೂರು ನಗರದಲ್ಲಿ 13 ವಲಯ ಸಮಿತಿಗಳನ್ನು ಹಾಗೂ ಶ್ರೀ ಮಹೇಶ್ ಶೆಟ್ಟಿ ತೆಳ್ಳಾರ್ ಅವರ ಅಧ್ಯಕ್ಷತೆಯಲ್ಲಿ ಮುಂಬೈ ಸಮಿತಿಯನ್ನು ರಚಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ ಭಾಸ್ಕರ ಚಂದ್ರ ಶೆಟ್ಟಿ, ಶನಿಶ್ವರ ಪೂಜಾ ಸಮಿತಿ ಅದ್ಯಕ್ಷರಾದ ರಾಮಚಂದ್ರ ಚೌಟ, ಮಾತೃಮಂಡಳಿ ಅಧ್ಯಕ್ಷರಾದ ಮಾಜಿ ಮೇಯರ್ ವಿಜಯ ಅರುಣ್, ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ ಮತ್ತು ಉಮೇಶ್ ರೈ ,ಮೋನಪ್ಪ ಭಂಡಾರಿ, ಮಾಜಿ ಕಾರ್ಪೊರೇಟರ್ ಶಕೀಲ ಕಾವ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post