ಬೆಳಗಾವಿ: ಉದ್ಯಮಿ ಶಿವಾನಂದ ನೀಲಣ್ಣವರ್ ಎಂಬವರಿಗೆ ಸೇರಿದ ಶಿವಂ ಅಸೋಸಿಯೇಟ್ಸ್ ಕಚೇರಿ ಮೇಲೆ ಕಂದಾಯ, ಸಹಕಾರ ಹಾಗೂ ಪೊಲೀಸ್ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಇಲ್ಲಿನ ಶಿವಬಸವ ನಗರದಲ್ಲಿರುವ ಶಿವಾನಂದ ನೀಲಣ್ಣವರಗೆ ಸೇರಿದ ಎರಡು ಕಚೇರಿಗಳ ಮೇಲೆ ಉಪವಿಭಾಗಾಧಿಕಾರಿ ಶ್ರವಣ್ ನಾಯಕ ನೇತೃತ್ವದ ತಂಡ ದಾಳಿ ನಡೆಸಿತು. ಮಾಳಮಾರುತಿ ಠಾಣೆ ಪೊಲೀಸರ ಭದ್ರತೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಅಧಿಕಾರಿಗಳು, ಮಧ್ಯಾಹ್ನದಿಂದ ಠಿಕಾಣಿ ಹೂಡಿ ಹಣಕಾಸು ವ್ಯವಹಾರ, ಹೂಡಿಕೆ ಹಾಗೂ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಸಂಬಂಧಿಸಿದ ದಾಖಲೆಗಳ ತಪಾಸಣೆಯಲ್ಲಿ ತೊಡಗಿದರು.
ಶಿವಾನಂದ ನೀಲಣ್ಣವರ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ, ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಕಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ನನ್ನ ಬಳಿ 15 ಸಾವಿರ ಬಂದೂಕುಗಳಿವೆ. ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ, ನಾನು ಯಾರಿಗೂ ಹೆದರಲ್ಲ. 2028ರಲ್ಲಿ 224 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗಿ ತೋರಿಸಲೇನು ಎಂಬ ಮಾತುಗಳನ್ನಾಡಿದ್ದರು. ಈ ಮಾತುಗಳು ಸೋಶಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿತ್ತು. ಅಲ್ಲದೇ ಓಂ ನಮಃ ಶಿವಾಯ ಎಂದು ಮಾತು ಶುರು ಮಾಡುತ್ತಿರುವುದು ಟ್ರೆಂಡ್ ಆಗಿತ್ತು. ನಾನು ಶಿವನ ಅವತಾರ, ನಿಮ್ಮೆಲ್ಲರನ್ನು ಉದ್ಧಾರ ಮಾಡಲು ನಾನು ಬಂದಿರೋದು ಎನ್ನುತ್ತಾ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದರು.
ಇದರ ಬೆನ್ನಲ್ಲೆ ಮೇ 17ರಂದು 25 ಸಾವಿರ ಜನರನ್ನು ಸೇರಿಸಿ “ಸ್ವಚ್ಛ ಬೆಳಗಾವಿ ಸಂಭ್ರಮ” ಹೆಸರಿನಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಸರದಾರ್ಸ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಶಿವಾನಂದ ನೀಲಣ್ಣವರ ಭರದ ಸಿದ್ಧತೆ ನಡೆಸಿದ್ದರು. ಈ ಕಾರ್ಯಕ್ರಮ ಸಂಬಂಧ ನಗರದ ಪ್ರಮುಖ ವೃತ್ತಗಳಲ್ಲಿ ಕಟೌಟ್ಗಳನ್ನು ಹಾಕಲಾಗಿತ್ತು. ಅನಧಿಕೃತವಾಗಿ ಕಟೌಟ್ ಹಾಕಲಾಗಿದೆ ಅಂತಾ ಇಂದು ಬೆಳಗ್ಗೆ ಅವುಗಳನ್ನು ತೆರವುಗೊಳಿಸಲಾಗಿತ್ತು. ಇದಾದ ಕೆಲವೇ ಗಂಟೆಯಲ್ಲಿ ಅವರ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಪ್ರಕರಣದ ಗಾಂಭೀರ್ಯವನ್ನು ಅರಿತು ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ ತನಿಖೆಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಬೆಳಗಾವಿಯ ಶಿವಬಸವನಗರದಲ್ಲಿರುವ ಕಚೇರಿ, ಮನೆ ಹಾಗೂ ಅಪಾರ್ಟ್ಮೆಂಟ್ ಸೇರಿದಂತೆ ಹಲವು ಕಡೆಗಳಲ್ಲಿ ಎಸಿ ಶ್ರವಣ್ ಕುಮಾರ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಪೊಲೀಸರ ಬಿಗಿ ಬಂದೋಬಸ್ತ್ನೊಂದಿಗೆ 24 ಗಂಟೆಗಳ ಕಾಲ ಸುದೀರ್ಘ ಜಾಲಾಡಿದ್ದು, ಸದ್ಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.
ದಾಖಲೆಗಳಿಲ್ಲದ ಸಾವಿರಾರು ಕೋಟಿ ವ್ಯವಹಾರ: ಆರ್ಬಿಐ ನಿಯಮಗಳ ಉಲ್ಲಂಘನೆ: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅತಿರೇಕದ ಭಾಷಣಗಳ ಮೂಲಕ ವೈರಲ್ ಆಗಿದ್ದ ಶಿವಾನಂದ ನೀಲಣ್ಣವರ್ ಹಿನ್ನೆಲೆಯನ್ನು ಕೆದಕಿದಾಗ ಈ ಬೃಹತ್ ಜಾಲ ಪತ್ತೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಯಾವುದೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಹಾಗೂ ಹೂಡಿಕೆ ಮಾಡಿದ ಸಾರ್ವಜನಿಕರ ಹಣಕ್ಕೆ ಯಾವುದೇ ಅಧಿಕೃತ ದಾಖಲೆಗಳನ್ನು ನಿರ್ವಹಿಸಿಲ್ಲ ಎನ್ನಲಾಗಿದೆ. ಆನ್ಲೈನ್ ಮೂಲಕವೇ ಇಷ್ಟೊಂದು ಕೋಟ್ಯಂತರ ರೂ ವ್ಯವಹಾರ ನಡೆದಿದ್ದರೂ ಆದಾಯ ತೆರಿಗೆ ಇಲಾಖೆ ಅಥವಾ ಜಾರಿ ನಿರ್ದೇಶನಾಲಯದ ಗಮನಕ್ಕೆ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆಯ ವೇಳೆ ವ್ಯಕ್ತಿಯೊಬ್ಬರು ಯಾವುದೇ ದಾಖಲೆಯಿಲ್ಲದೆ 5 ಲಕ್ಷ ರೂ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post