ಮಂಗಳೂರು, ಫೆ.17: ನಾರಾಯಣ ಗುರು ಅಭಿವೃದ್ಧಿ ನಿಗಮ ಮಾಡುತ್ತೇವೆಂದು ಹೇಳಿ ಮುಖ್ಯಮಂತ್ರಿ ಬೊಮ್ಮಾಯಿ ಮಾತು ತಪ್ಪಿದ್ದಾರೆ. ಬಜೆಟ್ ನಲ್ಲಿ ಅಭಿವೃದ್ಧಿ ನಿಗಮದ ಪ್ರಸ್ತಾಪವನ್ನೇ ಮಾಡದೆ ಬಿಲ್ಲವರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದೀರಿ. ರಾಜ್ಯದಲ್ಲಿ 90 ಲಕ್ಷ ಬಿಲ್ಲವರಿದ್ದಾರೆ. ಇದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸುತ್ತೀರಿ ಎಂದು ಬಿಲ್ಲವ ಮುಖಂಡರಾದ ಪದ್ಮರಾಜ್ ಮತ್ತು ಸತ್ಯಜಿತ್ ಸುರತ್ಕಲ್ ಕಿಡಿಕಾರಿದ್ದಾರೆ.
ಖಾಸಗಿ ಹೊಟೇಲ್ನಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಾರಾಯಣಗುರು ನಿಗಮ ಸ್ಥಾಪನೆ ಮಾಡಬೇಕು ಎಂಬುದು ನಾಲ್ಕು ವರ್ಷಗಳಿಂದ ನಾವು ಹೋರಾಟ ಮಾಡಿಕೊಂಡು ಬಂದಿದ್ದೆವು. ಆದರೆ ಸರಕಾರ ಮುತುವರ್ಜಿ ವಹಿಸದಿದ್ದುದರಿಂದ ಜನವರಿಯಲ್ಲಿ ಸಮಾವೇಶ ಮಾಡಲು ತಯಾರಿ ಮಾಡಿದೆವು. ಆಗ ನಿಗಮವನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗುತ್ತದೆ ಸಚಿವರು ಭರವಸೆ ನೀಡಿದ್ದರಿಂದ ಸಮಾವೇಶ ಕೈಬಿಟ್ಟಿದ್ದೆವು. ಜ.5ರಂದು ಸಚಿವ ಸುನಿಲ್ ಕುಮಾರ್ ಮೂಲಕ ಸಿಎಂಗೆ ಮನವಿ ನೀಡಲಾಯಿತು. ನಿಗಮ ಘೋಷಣೆ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದರು. ಆದರೆ ಇಂದಿನ ಬಜೆಟ್ನಲ್ಲಿ ನಿಗಮ ಘೋಷಣೆ ಮಾಡದೆ ಅನ್ಯಾಯ ಎಸಗಿದ್ದಾರೆ ಎಂದರು.

ಸತ್ಯಜಿತ್ ಸುರತ್ಕಲ್ ಮಾತನಾಡಿ, 18 ವರ್ಷಗಳ ಹಿಂದೆ ಶೇಂದಿ ನಿಷೇಧ ಆದಾಗಲೇ ಅಭಿವೃದ್ಧಿ ನಿಗಮ ಮಾಡಬೇಕಿತ್ತು. ಅಂದು ಅಧಿಕಾರದಲ್ಲಿದ್ದವರು ಮುಂದಿನ ಬಜೆಟಲ್ಲಿ ನಿಗಮ ಘೋಷಿಸುವುದಾಗಿ ತಿಳಿಸಿದ್ದರು. ಆದರೆ ಅದನ್ನು ಮಾಡಿಲ್ಲ. ಈ ಬಾರಿ ನಾವು ಹಕ್ಕೊತ್ತಾಯ ಮಾಡಿದ್ದೆವು. ಬಿಲ್ಲವ ಸಮಾಜದ ಪರವಾಗಿ ಪ್ರಣವಾನಂದ ಸ್ವಾಮೀಜಿ ಮಂಗಳೂರಿನಿಂದ ಉಡುಪಿ, ದಾವಣಗೆರೆ ಮೂಲಕ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದಾರೆ. ಮೊನ್ನೆ ಸಮಾರೋಪ ಸಂದರ್ಭದಲ್ಲಿ ಸಚಿವರೇ ಬಂದು ಬೇಡಿಕೆ ಈಡೇರಿಸುವ ಹೇಳಿಕೆ ನೀಡಿದ್ದರು. ಈಗ ಬಜೆಟ್ ನಲ್ಲಿ ಹಣಕಾಸು ಹೊಂದಿಕೆ ಮಾಡಿಕೊಂಡು ಘೋಷಣೆ ಮಾಡಬೇಕಿತ್ತು. ಇಲ್ಲಿ ಸಾಧ್ಯವಾಗದ್ದು ಮುಂದೆ ಮಾಡುವ ಭರವಸೆ ಉಳಿದಿಲ್ಲ.
ನಾರಾಯಣ ಗುರು ವಸತಿ ಶಾಲೆ ಎಲ್ಲ ಸಮಾಜಕ್ಕೆ ಸಂಬಂಧಿಸಿದ್ದಾಗಿದೆ. ಇದರಿಂದ ಬಿಲ್ಲವ ಸಮಾಜದ ಬದುಕಿನ ಏಳಿಗೆ ಆಗಲ್ಲ. ಶೈಕ್ಷಣಿಕ, ಆರ್ಥಿಕ ಏಳಿಗೆಗೆ ನಿಗಮ ಅಗತ್ಯವಾಗಿತ್ತು. 15 ಜಿಲ್ಲೆಗಳಲ್ಲಿ ನಾರಾಯಣ ಗುರು ವಿಚಾರ ವೇದಿಕೆಯ ಸಂಘಟನೆ ಇದೆ. ರಾಜ್ಯಾದ್ಯಂತ ಹೋರಾಟದ ಶಕ್ತಿ ಇದೆ. ಹಾಗಾಗಿ ಹೋರಾಟ ಮುಂದುವರಿಸುತ್ತೇವೆ. ಅದಕ್ಕಿಂತ ಮೊದಲು ಸರಕಾರದಿಂದ ಆದ ಲೋಪ ಸರಿಪಡಿಸಬೇಕು. ಫೆ.24ರವರೆಗೆ ನಡೆಯುವ ಅಧಿವೇಶನ ದಲ್ಲಿ ನಿಗಮ ಘೋಷಿಸಿ 500 ಕೋ.ರೂ. ಮೀಸಲಿಡಬೇಕು. ಇಲ್ಲದಿದ್ದರೆ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪ ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕು. ಅಲ್ಲದೆ ಸಮುದಾಯದ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಲ್ಲವ ಸಮುದಾಯದ ಮುಖಂಡರಾದ ಅಕ್ಷಿತ್ ಸುವರ್ಣ, ದೇವೇಂದ್ರ ಪೂಜಾರಿ, ಸೂರ್ಯಕಾಂತ, ಜಯಶ್ರೀ ಸುವರ್ಣ, ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post