ಮಂಗಳೂರು, ಜುಲೈ 18: ಕುಡಿದ ಮತ್ತಿನಲ್ಲಿ ಯುವಕನೊಬ್ಬ ಕೈಯಲ್ಲಿ ಮಚ್ಚು ಹಿಡಿದುಕೊಂಡು ಮೂಡುಬಿದ್ರೆ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಾ ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದ್ದು ಬಳಿಕ ಸ್ಥಳೀಯರೇ ಸೇರಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಬಂಟ್ವಾಳ ತಾಲೂಕಿನ ವಾಮನಪದವು ಬಳಿಯ ಅಜ್ಜಿಬೆಟ್ಟು ನಿವಾಸಿ ರಾಜೇಶ್ (22) ಎಂದು ಯುವಕನನ್ನು ಗುರುತಿಸಲಾಗಿದ್ದು ಮೂಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಪರೀತ ಕುಡಿತದ ಚಟ ಹೊಂದಿದ್ದು ಕಂಠಪೂರ್ತಿ ಕುಡಿದು ಈ ಕೃತ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಯುವಕ ಕೈಯಲ್ಲಿ ಮಚ್ಚು ಹಿಡಿದು ಅತ್ತಿತ್ತ ಹೋಗಿದ್ದು ಬಳಿಕ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಶಾಪ್ ಗೆ ಬಂದು ಅಲ್ಲಿದ್ದವರಿಗೆ ಬೆದರಿಕೆ ಹಾಕಿದ್ದಾನೆ. ಯುವಕನ ಓಡಾಟದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.

ಬಸ್ ನಿಲ್ದಾಣದ ಆವರಣದಲ್ಲೇ ಇದ್ದ ಮೊಬೈಲ್ ಅಂಗಡಿಯಲ್ಲಿ ಗ್ರಾಹಕರು ವ್ಯಾಪಾರ ನಿರತರಾಗಿದ್ದ ಸಂದರ್ಭದಲ್ಲೇ ಆರೋಪಿ ಒಳಗೆ ನುಗ್ಗಿದ್ದಾನೆ. ಅಂಗಡಿಯ ಕೌಂಟರ್ ಬಳಿ ನುಗ್ಗಿ, ತನ್ನ ಜೀನ್ಸ್ ಪ್ಯಾಂಟ್ನ ಒಳಗಡೆಯಿಂದ ತಲ್ವಾರ್ ಅನ್ನು ಹೊರಗೆ ಎಳೆದಿದ್ದಾನೆ. ಅಲ್ಲದೇ ಕೌಂಟರ್ನಲ್ಲಿದ್ದ ಸಿಬ್ಬಂದಿಗೆ ತಲ್ವಾರ್ ತೋರಿಸಿ ಹೆದರಿಸುತ್ತಾ, ತಕ್ಷಣವೇ ತನಗೆ ಮೊಬೈಲ್ ಕೊಡುವಂತೆ ಅಬ್ಬರಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ಕೌಂಟರ್ ಒಳಗಿದ್ದ ಮಳಿಗೆಯ ಸಿಬ್ಬಂದಿಯತ್ತ ತಲ್ವಾರ್ ತೋರಿಸಿ ಬೆದರಿಸಿದ್ದಾನೆ. ಈ ವೇಳೆ ಅಂಗಡಿಯಲ್ಲಿದ್ದ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿ ದೂರ ಸರಿದಿದ್ದಾರೆ. ಆದರೆ ಅಂಗಡಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ಯುವಕನನ್ನು ಎದುರಿಸಿ, ಆತನ ಕೈಯಲ್ಲಿದ್ದ ತಲ್ವಾರ್ ಅನ್ನು ಬಲವಂತವಾಗಿ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ತಲ್ವಾರ್ ಬೀಸಿ ಸಾರ್ವಜನಿಕ ಶಾಂತಿ ಕದಡಿದ್ದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಆರೋಪಿಯನ್ನು ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಆತ ಈ ಕೃತ್ಯವನ್ನು ಯಾವ ಉದ್ದೇಶಕ್ಕಾಗಿ ಎಸಗಿದ್ದಾನೆ ಹಾಗೂ ಆತನ ಹಿನ್ನೆಲೆ ಏನು ಎಂಬ ಕುರಿತು ತನಿಖೆ ಮುಂದುವರೆದಿದೆ. ತಲ್ವಾರ್ ಬೀಸಿ ದಾಂಧಲೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Discover more from Coastal Times Kannada
Subscribe to get the latest posts sent to your email.







Discussion about this post