ಕಾಸರಗೋಡು, ಜು 19 : ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ರಿವಾಲ್ವರ್ ಸಹಿತ ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೀಯಪದವಿನ ಅಬ್ದುಲ್ ರಹೀಮ್(36) ಮತ್ತು ಬಂದ್ಯೋಡು ಅಡ್ಕದ ಅಬ್ದುಲ್ ಲತೀಫ್ (32) ಬಂಧಿತರು. ಅಬ್ದುಲ್ ಲತೀಫ್ ನನ್ನು ಕೋಜಿಕ್ಕೋಡ್ ನ ವಸತಿಗೃಹದಿಂದ ಬಂಧಿಸಲಾಗಿದ್ದು , ಈತ ನೀಡಿದ ಮಾಹಿತಿಯಂತೆ ಅಬ್ದುಲ್ ರಹೀಮ್ ನನ್ನು ಬಂಧಿಸಲಾಗಿದೆ.
ಆತನಿಂದ ಜೀವಂತ ಗುಂಡುಗಳಿದ್ದ ರಿವಾಲ್ವರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಹೀಮ್ ವಿರುದ್ಧ ಸುಳ್ಯ, ಪುತ್ತೂರು, ವಿಟ್ಲ, ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ಹಾಗೂ 5 ವಾರಂಟ್ಗಳು ಜಾರಿಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಫಾ ಕಾಯ್ದೆಯಡಿ ಜೈಲಿನಲ್ಲಿದ್ದ ಅಬ್ದುಲ್ ರಹೀಮ್ ವರ್ಷದ ಹಿಂದೆ ಬಿಡುಗಡೆಯಾಗಿದ್ದರು.
ಎಂಟು ತಿಂಗಳ ಹಿಂದೆ ಮೀಯಪದವು ಬಾಳಿಯೂರಿನಲ್ಲಿ ಕೆಂಗಲ್ಲು ಸಾಗಾಟ ಲಾರಿ ಅಪಹರಿಸಿ ಚಾಲಕನ ಹಣ , ಮೊಬೈಲ್ ದರೋಡೆ ಮಾಡಿದ ಪ್ರಕರಣದ ಆರೋಪಿಯಾಗಿದ್ದಾನೆ. ಎರಡು ವರ್ಷಗಳ ಹಿಂದೆ ಮೀಯಪದವಿನಲ್ಲಿ ಅಂದು ಕಾಸರಗೋಡು ಡಿ ವೈ ಎಸ್ಪಿ ಯಾಗಿದ್ದ ಪಿ . ಪಿ ಸದಾನಂದನ್ ನೇತೃತ್ವದ ಪೊಲೀಸ್ ತಂಡ ಬಂಧಿಸಲು ಮುಂದಾದಾಗ ರಹೀಮ್ ಮತ್ತು ಈತನ ಸಹಚರರು ಪೊಲೀಸರತ್ತ ಗುಂಡು ಹಾರಿಸಿ ಬಿಯರ್ ಬಾಟ್ಲಿ ಎಸೆದು ಕರ್ನಾಟಕಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದರು. ಪರಾರಿಯಾಗುವ ಮಧ್ಯೆ ವಿಟ್ಲ ಪೋಲೀಸರ ಮೇಲೆಯೂ ಹಲ್ಲೆ ನಡೆಸಿದ್ದರು.
ಅಬ್ದುಲ್ ಲತೀಫ್ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂಭತ್ತರಷ್ಟು ಪ್ರಕರಣಗಳ ಆರೋಪಿಯಾಗಿದ್ದಾನೆ. ಎರಡು ವರ್ಷಗಳ ಹಿಂದೆ ಉಪ್ಪಳ ಸೋಂಕಾಲ್ ನಲ್ಲಿ ಪೈಂಟಿಂಗ್ ಕಾರ್ಮಿಕ ಅಲ್ತಾಫ್ ನನ್ನು ಅಪಹರಿಸಿ ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದಾನೆ. ಒಂದೂವರೆ ತಿಂಗಳ ಹಿಂದೆ ಬಂದ್ಯೋಡು ಅಡ್ಕದಲ್ಲಿ ಮುಜೀಬ್ ರಹಮಾನ್ ರವರ ಮನೆ ಗೆ ನುಗ್ಗಿ ದಾಂದಲೆ ನಡೆಸಿದ ಪ್ರಕರಣದಲ್ಲಿ ಶಾಮೀಲಾಗಿದ್ದ ಈತನ ತಲೆ ಮರೆಸಿಕೊಂಡಿದ್ದನು.
Discussion about this post