ಮಂಗಳೂರು: 2021 ಜನವರಿ 25ರಂದು ಬಂಟ್ವಾಳ ತಾಲೂಕಿನಲ್ಲಿ ಚಿನ್ನಾಭರಣ ಕಳ್ಳತನದ ಸಂಚು ಹೂಡಿ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕರವರು ಈ ಮಾಹಿತಿ ನೀಡಿದ್ದಾರೆ.
ಅಮ್ಟಾಡಿ ಹೀರಾ ನಿವಾಸಿ ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ (30), ನರಿಕೊಂಬು ಅಂತರಹೌಸ್ ನಿವಾಸಿ ಸತೀಶ್ (33) ನರಿಕೊಂಬು ಪದಕಟ್ಟೆ ಹೊಯಿಗೆಬೈಲು ನಿವಾಸಿ ಚರಣ್ ಕುಮಾರ್ (34) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು.
ಪ್ರಕರಣದ ಹಿನ್ನೆಲೆ: ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಪಾಂಡೀಲಿ ಎಂಬಲ್ಲಿ ಬೆನೆಡಿಕ್ಟ್ ಕಾರ್ಲೊ (80) ಅವರು ತನ್ನ ಪತಿ ಇನಾಸ್ ಕಾರ್ಲೋ ಜತೆ ವಾಸಿಸುತ್ತಿದ್ದರು. ಇನಾರ್ಸ್ ಕಾರ್ಲೋ ಅವರು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಈ ದಂಪತಿಯ ಆರೈಕೆಗಾಗಿ ವಿಲ್ಮಾ ಪ್ರಸ್ಚಿತಾ 2 ತಿಂಗಳಿನಿಂದ ಕೆಲಸಕ್ಕೆ ಬರುತ್ತಿದ್ದಳು. ಬೆನೆಡಿಕ್ಟ್ ಅವರಲ್ಲಿ ಚಿನ್ನಾಭರಣಗಳಿರುವುದನ್ನು ಗಮನಿಸಿದ ವಿಲ್ಮಾ ಅದನ್ನು ಕಳ್ಳತನ ಮಾಡುವ ಸಂಚು ರೂಪಿಸಿದ್ದಳು. ತನ್ನ ಪರಿಚಯದ ಸತೀಶನಿಗೆ ಈ ಮಾಹಿತಿ ನೀಡಿದಾಗ ಆತ ಬೆನೆಡಿಕ್ಟ್ ಕಾರ್ಲೋ ಅವರಿಗೆ ಆಹಾರದ ಜತೆ ವಿಷ ಉಣಿಸುವ ಸಲಹೆ ನೀಡುತ್ತಾನೆ. ಅದರಂತೆ 2021ರ ಜ.25ರಂದು ರಾತ್ರಿ ವಿಲ್ಮಾ ವಿಷವುಣಿಸಿದ್ದಳು. ಇದರಿಂದ ಬೆನೆಡಿಕ್ಟಾ ಅರೆಜೀವ ಸ್ಥಿತಿಯಲ್ಲಿದ್ದರು. ಈ ವೇಳೆ ವಿಲ್ಮಾ ಮತ್ತೆ ಸತೀಶ್ಗೆ ಕರೆ ಮಾಡಿದ್ದು, ಬೆನೆಡಿಕ್ಟಾರನ್ನು ಉಸಿರುಗಟ್ಟಿ ಕೊಲ್ಲುವ ಯೋಜನೆ ರೂಪಿಸುತ್ತಾರೆ. ಅದಕ್ಕಾಗಿ ಚರಣ್ ಕುಮಾರ್ ಎಂಬಾತನನ್ನು ಸತೀಶ್ ಆ ಮನೆಗೆ ಕಳುಹಿಸುತ್ತಾನೆ. ಚರಣ್ ಕುಮಾರ್ ಆ ಮನೆಗೆ ತೆರಳಿ ವಿಲ್ಮಾ ಜತೆ ಸೇರಿಕೊಂಡು ಬೆನೆಡಿಕ್ಟ್ರನ್ನು ತಲೆದಿಂಬು ಹಾಗೂ ಬೈರಾಸ್ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡುತ್ತಾರೆ.
ಬಳಿಕ ಬೆನೆಟಿಕ್ಟಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಮನೆಯಲ್ಲಿದ್ದ ಚಿನ್ನದ ಕಿವಿಯೊಲೆ, ಕೈ ಬಳೆ, ಉಂಗುರಗಳು, ಚೈನ್ ಸೇರಿದಂತೆ ಸುಮಾರು 2,75,000 ರೂ. ಮೌಲ್ಯದ ಒಟ್ಟು 61.070 ಗ್ರಾ ತೂಕದ ಚಿನ್ನಾಭರಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣ ಜ.26ರಂದು ಬೆಳಕಿಗೆ ಬಂದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗುತ್ತದೆ. ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ವ್ಯವಸ್ಥಿತ ಕೊಲೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಒಟ್ಟು 44 ಸಾಕ್ಷಿದಾರರ ಪೈಕಿ 32 ಸಾಕ್ಷಿದಾರ ವಿಚಾರಣೆ ನಡೆಸಿ ಮೂವರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಗಳು ಪಾವತಿಸಿದ ಒಟ್ಟು 33 ಸಾವಿರ ರೂ. ದಂಡದಲ್ಲಿ 8 ಸಾವಿರ ರೂ ಗಳನ್ನು ಸರ್ಕಾರಕ್ಕೆ ಪಾವತಿಸಬೇಕು ಹಾಗೂ 25 ಸಾವಿರ ರೂ.ನ್ನು ಮೃತರ ಮಗ ರೊನಾಲ್ಡ್ ಕಾರ್ಲೋ ಅವರಿಗೆ ನೀಡಲು ಆದೇಶಿಸಲಾಗಿದೆ. ಅಂದಿನ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕರವರು ವಾದ ಮಂಡನೆ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post