ಬೆಳ್ತಂಗಡಿ : ತಾಲ್ಲೂಕಿನ ಶಿಶಿಲದಲ್ಲಿ ಅಮಲು ಪದಾರ್ಥ ಸೇವಿಸಿದ್ದ ಮತ್ತಿನಲ್ಲಿದ್ದ ವ್ಯಕ್ತಿಯು ಸೋಮವಾರ ರಾತ್ರಿ ಪತ್ನಿಯ ಕಣ್ಣಿಗೆ ಮತ್ತು ಮುಖಕ್ಕೆ ಕಚ್ಚಿ ಮಾಂಸ ಹೊರತೆಗೆದಿದ್ದಲ್ಲದೇ, ಹೆಲ್ಮೆಟ್ನಿಂದಲೂ ಹಲ್ಲೆ ನಡೆಸಿದ್ದು, ಆಕೆಯ ಎಡಗಣ್ಣು ಸಂಪೂರ್ಣ ಹಾನಿಗೊಂಡಿದೆ.
ಶಿಶಿಲ ಬಳಿಯ ಕೋಟೆಬಾಗಿಲು ನಿವಾಸಿ ಸುರೇಶ್ ಗೌಡ ಎಂಬಾತನೇ ಈ ರಾಕ್ಷಸಿ ಕೃತ್ಯ ಎಸಗಿರುವಾತ. ಪತಿ ಸುರೇಶ್ ಗೌಡ (55) ಕುಡಿದು ಬಂದು ಜಗಳ ಮಾಡಿದ್ದು ಈ ವೇಳೆ ಆಕೆಯ ಕಣ್ಣು ಹಾಗೂ ಕೆನ್ನೆಯ ಭಾಗಕ್ಕೆ ಕಚ್ಚಿ ಮಾಂಸವನ್ನೇ ಕಿತ್ತು ಹಾಕಿದ್ದಾನೆ. ಆ ಬಳಿಕ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಂದೆಯ ದಾಳಿಯಿಂದ ತಾಯಿಯನ್ನು ಬಿಡಿಸಲು ಬಂದ ಮಗಳು ಪೂಜಾ (19) ತಲೆ ಹಾಗೂ ಕಣ್ಣಿಗೂ ಆರೋಪಿ ಹೊಡೆದಿದ್ದಾನೆ. ಆಗ ಆಕೆ ಪ್ರಾಣ ಉಳಿಸಿಕೊಳ್ಳಲು ತಂದೆಯಿಂದ ತಪ್ಪಿಸಿಕೊಂಡು ನೆರೆಹೊರೆಯವರಿಗೆ ವಿಚಾರ ತಿಳಿಸಿದ್ದಾಳೆ.
ನೆರೆಹೊರೆಯವರು ಧಾವಿಸುತ್ತಿದ್ದಂತೆ ಆರೋಪಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ. ಪತಿಯಿಂದ ಜೀವ ಉಳಿಸಿಕೊಳ್ಳಲು ಓಡಿ ಹೋಗಿರುವ ಪತ್ನಿ ಇಂದು ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಪರೀತವಾಗಿ ಗಾಯಗೊಂಡ ತಾಯಿ ಹಾಗೂ ಪುತ್ರಿಯನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post