ನವದೆಹಲಿ: ಉಕ್ರೇನ್ನ ಒಡೆಸಾ ಬಂದರಿನಿಂದ ಹೊರಡುತ್ತಿದ್ದ ಎಂವಿ ಗೋಲ್ಡನ್ ಲಿಯೋ ಎಂಬ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ನಾಲ್ವರು ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯನ್ನು ಸೋಮವಾರ ಭಾರತ ಖಂಡಿಸಿದೆ.
ವಿದೇಶಾಂಗ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ, ಜುಲೈ 19ರಂದು ಸಂಜೆ ಒಡೆಸಾ ಬಂದರಿನಿಂದ ಹೊರಡುವಾಗ ಹಡಗಿನ ಮೇಲೆ ದಾಳಿ ನಡೆಸಲಾಗಿದೆ. ಘಟನೆ ನಡೆದ ವೇಳೆ 5 ಮಂದಿ ಭಾರತೀಯ ಪ್ರಜೆಗಳೂ ಸೇರಿದಂತೆ 17 ಸಿಬ್ಬಂದಿ ಹಡಗಿನಲ್ಲಿದ್ದರು. ಲಭ್ಯವಿರುವ ಮಾಹಿತಿ ಪ್ರಕಾರ, ನಾಲ್ವರು ಪ್ರಾಣ ಕಳೆದುಕೊಂಡಿದ್ದು, ಒಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದೆ.

ಕೇರಳದ 26 ವರ್ಷದ ನಾವಿಕ ಅಖಿಲ್ ಜೋಯನ್ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬರು. ಕಾಸರಗೋಡಿನ ವೆಲ್ಲರಿಕುಂಡುವಿನ ಎಕೆಜಿ ನಗರದವರಾದ ಇವರು ಕಳೆದ ಐದು ವರ್ಷಗಳಿಂದ ನಾವಿಕನಾಗಿ ಕೆಲಸ ಮಾಡುತ್ತಿದ್ದರು. ಆಹಾರ ಧಾನ್ಯಗಳನ್ನು ಸಾಗಿಸುತ್ತಿದ್ದ ಗಿನಿಯಾ-ಬಿಸ್ಸೌ ಧ್ವಜದ ಎಂವಿ ಗೋಲ್ಡನ್ ಲಿಯೋ ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ ಇವರು ಒಬ್ಬರಾಗಿದ್ದರು. ಈ ಹಡಗಿನಲ್ಲಿ ಭಾರತ ಮತ್ತು ಸಿರಿಯಾದ ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

“ಉಕ್ರೇನ್ನಲ್ಲಿರುವ ನಮ್ಮ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಆಡಳಿತಾತ್ಮಕ ಸಹಾಯವನ್ನು ಒದಗಿಸಲು ನಿರಂತರ ಶ್ರಮಿಸುತ್ತಿದೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಹಾಗೇ, ವಿದೇಶಾಂಗ ಸಚಿವಾಲಯವು ಮೃತರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಗಾಯಗೊಂಡಿರುವ ನಾವಿಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.
ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತ: ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಈ ಹಿಂಸಾಚಾರವನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ನಾಗರಿಕ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು ಮತ್ತು ಅವರ ಜೀವಕ್ಕೆ ಆಪತ್ತು ತರುವುದು ತೀವ್ರ ಖಂಡನೀಯ ಎಂದು ಭಾರತ ಹೇಳಿದೆ. ಮುಕ್ತ ಸಮುದ್ರಯಾನದ ಸ್ವಾತಂತ್ರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಅಡ್ಡಿಪಡಿಸುವ ಇಂತಹ ಕೃತ್ಯಗಳು ಅತ್ಯಂತ ವಿಷಾದಕರವಾಗಿದ್ದು, ಇಂತಹ ದಾಳಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ ಹೇಳಿದೆ.

Discover more from Coastal Times Kannada
Subscribe to get the latest posts sent to your email.








Discussion about this post