ಮಂಗಳೂರು, ಫೆ. 21: ಸಮಾಜ ಸೇವಾಸಕ್ತ ಡಾ. ರೊನಾಲ್ಡ್ ಕೊಲಾಸೊ ಅವರು ಕನ್ನಡ ನಾಡಿನ ಸುಪುತ್ರ, ಕುಲಾಸೆ ಅವರು ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರೆಂಬುದು ನಮಗೆಲ್ಲಾ ಇನ್ನಷ್ಟು ಅಭಿಮಾನದ ಸಂಗತಿ. ತಮ್ಮ ಜನಪರ ಸೇವೆಗಳಿಗಾಗಿ ರಾಜ್ಯ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವಾರು ಪುರಸ್ಕಾರಗಳು ಅವರನ್ನು ಅಲಂಕರಿಸಿವೆ. ಇತ್ತೀಚೆಗೆ, ತಮ್ಮ ಸೇವಾ ಹಾಗೂ ದತ್ತಿ ಕಾರ್ಯಗಳಿಗಾಗಿ ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಿಂದ “ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್’ (ಶ್ರೇಷ್ಠತಾ ಪ್ರಮಾಣಪತ್ರ) ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ, ಉದಾತ್ತ ವ್ಯಕ್ತಿತ್ವದ ಡಾ. ರೊನಾಲ್ಡ್ ಕೊಲಾಸೊ ಅವರಿಗೆ 24-02-23ರ ಶುಕ್ರವಾರ ಮಂಗಳೂರಿನಲ್ಲಿ “ನಾಗರಿಕ ಸನ್ಮಾನ” ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್ ಲೋಬೊ ಅವರು ತಿಳಿಸಿದ್ದಾರೆ.
ಸನ್ಮಾನ ಸಮಿತಿ ಏರ್ಪಡಿಸಿರುವ ಈ ಕಾರ್ಯಕ್ರಮವು ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಅತೀ ವಂದನೀಯ ಡಾ. ಪೀಟರ್ ಮಚಾದೊ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಅವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಶಾಸಕ ಜೆ ಆರ್ ಲೋಬೊ ನಗರದ ಪಂಪ್ವೆಲ್ನಲ್ಲಿರುವ ಫಾದರ್ ಮುಲ್ಲರ್ ಕನ್ನೆನ್ನನ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಮಂಗಳೂರು ಡಯೋಸಿಸ್ನ ಬಿಷಪ್ ಡಾ. ಪೀಟರ್ ಪೌಲ್ ಸಲ್ಮಾನ, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಯೆನಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಯೆನಪೋಯ ಅಬ್ದುಲ್ ಕುಞ್ಞ, ಉಡುಪಿ ಧರ್ಮಪ್ರಾಂತ್ಯ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ, ಸಿಎಸ್ಐ ದಕ್ಷಿಣ ಕರ್ನಾಟಕ ಡಯೋಸಿಸ್ನ ಬಿಷಪ್ ಹೇಮಚಂದ್ರ ಕುಮಾರ್, ಬೆಳ್ತಂಗಡಿ ಧರ್ಮಪ್ರಾಂತ್ಯ ಬಿಷಪ್ ಡಾ. ಲಾರೆನ್ಸ್ ಮುಕ್ಕುಳಿ, ಶಿವಮೊಗ್ಗ ಧರ್ಮಪ್ರಾಂತ್ಯ ಬಿಷಪ್ ಡಾ. ಫ್ರಾನ್ಸಿಸ್ ಸೆರಾವೊ, ಶಾಸಕ ಯು.ಟಿ.ಖಾದರ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಂ.ಮೋಹನ್ ಆಳ್ವ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸರ್ಕಾರಿ ವಲಯ ; ಅವರು ಮಾಡಿದ ಸೇವಾ ಕಾರ್ಯಗಳಲ್ಲಿ ಕರ್ನಾಟಕ ರಾಜ್ಯದ ಪೊಲೀಸ ಇಲಾಖೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 2 ಪೊಲೀಸ್ ಸ್ಟೇಶನ್ ಕಟ್ಟಡ ನಿರ್ಮಾಣ ಹಾಗೂ ಅನೇಕ ಪೊಲಿಸ್ ಠಾಣೆ ಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸುಸಜ್ಜಿತ ವಕೀಲರ ಭವನ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅದೇ ರೀತಿ ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಅಗತ್ಯ ಸೌಕರ್ಯಗಳನ್ನು ಮಾಡಿಕೊಟ್ಟಿದ್ದಾರೆ. ರಾಜ್ಯದ ಪಂಚಾಯತ್ ರಾಜ್ ಕಟ್ಟಡಗಳಿಗೆ ಪಿಡಬ್ಲ್ಯೂಡಿ/ಜಿಲ್ಲಾಪಂಚಾಯತ್/ಕಾರ್ಪೊರೇಶನ್ ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣ ಮೂಲಭೂತ ವ್ಯವಸ್ಥೆ ರಸ್ತೆ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ.
ಶಿಕ್ಷಣ ಕ್ಷೇತ್ರ ; ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ವಿಶೇಷವಾಗಿ ನವರತ್ನ ಅಗ್ರಹಾರ ಬೆಂಗಳೂರು ಇಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ 12 ಸಾವಿರ ಚದರಡಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲದೆ, ರಾಜ್ಯದ ವಿವಿಧೆಡೆ ಸರಿಸುಮಾರು 30 ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದಾರೆ.
ಆರೋಗ್ಯ ಕ್ಷೇತ್ರ ; ಆರೋಗ್ಯ ಕ್ಷೇತ್ರದಲ್ಲಿ ವಿವಿಧ ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆಗೂಡಿ ವಿವಿಧ ಆರೋಗ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು ಅನೇಕ ಸಂಸ್ಥೆಗಳಿಗೆ ಮೂಲಭೂತ ದೇಣಿಗೆ ನೀಡಿದ್ದಾರೆ.
ಧಾರ್ಮಿಕ ಕ್ಷೇತ್ರ ; ಓರ್ವ ನಿಷ್ಠಾವಂತ ಕ್ರೈಸ್ತ ಅನುಯಾಯಿ ಆಗಿದ್ದುಕೊಂಡು ಸರ್ವಧರ್ಮ ಸಮಭಾವ ನೀತಿಯಂತೆ ಬೆಂಗಳೂರಿನ ಬೋವಿಪಾಳ್ಯ- ಅಗ್ರಹಾರದಲ್ಲಿ ಮುನೀಶ್ವರ ದೇವಸ್ಥಾನವನ್ನು ನಿರ್ಮಿಸಲು ಪ್ರಮುಖ ಆರ್ಥಿಕ ದಾನಿಯಾಗಿದ್ದಾರೆ. 700 ವರುಷಗಳ ಹಿಂದಿನ ಸಿಂಗಾರಹಳ್ಳಿ-ಬೆಂಗಳೂರಿನಲ್ಲಿನ ಮದ್ದೂರಮ್ಮ ದೇವಸ್ಥಾನ ಕಟ್ಟಲು ಕೊಡುಗೆ ನೀಡಿದ್ದಾರೆ ಹಾಗೂ ಮಂಗಳೂರಿನ ಶ್ರೀ ಸೂರ್ಯನಾರಾಯಣ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಅತ್ಯಂತ ಹೆಚ್ಚು ಕೊಡುಗೆ ನೀಡಿದ್ದಾರೆ. ಮತ್ತು ರಾಜ್ಯದ ಬೇರೆ ಬೇರೆ 35 ದೇವಸ್ಥಾನಗಳಿಗೆ, ಮಸೀದಿ ನಿರ್ಮಾಣಕ್ಕೆ ವಿವಿಧ ರೀತಿಯ ಆರ್ಥಿಕ ನೆರವು, ಚರ್ಚ್ ಕಟ್ಟಡ ನಿರ್ಮಾಣಕ್ಕೆ ಮತ್ತು ಮೂಲಭೂತ ಸೌಕರ್ಯಕ್ಕೆ ದೇಣಿಗೆ ನೀಡಿದ್ದಾರೆ.
ವ್ಯಕ್ತಿಗತ ಸಹಾಯ ; ಕರ್ನಾಟಕದಾದ್ಯಂತ ಹಲವು ಮಂದಿಗೆ ಸಂಪೂರ್ಣ ಮನೆ ನಿರ್ಮಾಣ ಮಾಡಿಕೊಟ್ಟಿದಾರೆ. ಹಾಗೂ ರೈತರಿಗೆ ಮತ್ತು ಗ್ರಾಮಸ್ಥರಿಗೆ ಕೂಡಾ ಮನೆ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ. ಕಲೆ ಮತ್ತು ಸಂಸ್ಕೃತಿ
ಕಲೆ ಮತ್ತು ಸಂಸ್ಕೃತಿ ; ಮಂಗಳೂರಿನ ಕೊಂಕಣಿ ಕಲಾ ಕೇಂದ್ರ ಕಟ್ಟಡ, ಮಾಂಡ್ ಸೊಬಾಣ್ ಕೊಂಕಣಿ ವಿಶ್ವ ಕೊಂಕಣಿ ಕೇಂದ್ರಗಳಿಗೆ ಮತ್ತು ಕೊಂಕಣಿ ಕಲಾವಿದರಿಗೆ, ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡಿದ್ದಾರೆ.

ಸಂತೃಸ್ತರಿಗೆ ಸಹಾಯ ; ವಿವಿಧ ಪ್ರಾಕೃತಿಕ ವಿಕೋಪ ನಡೆದಾಗ ಕರ್ನಾಟಕ ಸರಕಾರಕ್ಕೆ ಪರಿಹಾರ ನಿಧಿ ನೀಡಿದ್ದಲ್ಲದೆ ಕೊರೊನಾ ಸಂದರ್ಭದಲ್ಲಿ 18 ಸಾವಿರ ಕುಟುಂಬಗಳಿಗೆ ಅಗತ್ಯ 20 ದಿನಸಿ ವಸ್ತುಗಳ ಬ್ಯಾಗುಗಳನ್ನು ವಿತರಿಸಿದ್ದಾರೆ.
ಇದೇ ರೀತಿ ಕ್ರೀಡಾ ಕ್ಷೇತ್ರ, ಸಮುದಾಯ ಭವನಗಳ ನಿರ್ಮಾಣ ಸಾಮೂಹಿಕ ವಿವಾಹ ವಿವಿಧ ಸಂಘಟನೆಗಳ ಸೇವಾ ಕಾರ್ಯಕ್ರಮ, ಮಹಿಳಾ ಸುರಕ್ಷತಾ ಯೋಜನೆಗಳು ಸಾರ್ವಜನಿಕ ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಯುವ ಜನರಿಗಾಗಿ ಕೌಶಲ್ಯಾಭಿವೃದ್ಧಿ ಯೋಜನೆಗಳು ವಿದ್ಯುತ್ ಸರಬರಾಜು ಇಲಾಖೆಗೆ ಅಗತ್ಯ ಕೊಡುಗೆ, ಸ್ಮಶಾನಗಳ ಅಭಿವೃದ್ಧಿ ಹೀಗೆ ಸಮಾಜದ ಎಲ್ಲಾ ವರ್ಗ ಜಾತಿ ಸಮುದಾಯ ಮತ್ತು ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಿದ್ದಾರೆ.
ಅವರ ಸೇವಾ ಕಾರ್ಯದಲ್ಲಿ ಯಾವುದೇ ಸಂದರ್ಭದಲ್ಲಿಯೂ ಜಾತಿ-ಮತ-ಭೇದವನ್ನು ಮಾಡದಿರುವುದು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಅವರ ಈ ಕಾರ್ಯಕ್ಕೆ ಅನೇಕ ರಾಷ್ಟ್ರೀಯ ಅಂತರರಾಷ್ಟ್ರೀಯ ಗೌರವ ದೊರಕಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಾಗರಿಕ ಸನ್ಮಾನ ಸಮಿತಿಯ ಸದಸ್ಯರಾದ ಸುರೇಶ್ ಬಲ್ಲಾಳ್, ಯು.ಟಿ. ಇಫ್ತಿಕಾರ್ ಅಲಿ, ಲೂಯಿ ಪಿಂಟೊ, ಡೆನ್ನಿಸ್ ಡಿಸಿಲ್ವಾ, ಸಂತೋಷ್ ಡಿಕೋಸ್ತಾ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post