ಮಂಗಳೂರು 4 ಮತ್ತು 5ನೇ ಪ್ಲಾಟ್ಫಾರಂ ಸೆಪ್ಟಂಬರ್ ವೇಳೆಗೆ ಸಿದ್ಧಗೊಂಡು ರೈಲು ಸಂಚಾರಕ್ಕೆ ಲಭ್ಯವಾಗಲಿದೆ ಎಂದು ದಕ್ಷಿಣ ರೈಲ್ವೇ ಮಹಾಪ್ರಬಂಧಕ ಜಾನ್ ಥಾಮಸ್ ತಿಳಿಸಿದ್ದಾರೆ.
ಮಂಗಳೂರಿಗೆ ಮಂಗಳವಾರ ಭೇಟಿ ನೀಡಿ ರೈಲ್ವೇ ವ್ಯವಸ್ಥೆ ಹಾಗೂ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರು ಸೆಂಟ್ರಲ್ನಲ್ಲಿ ಪಿಟ್ಲೆçನ್ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಹೊಸ ಪ್ಲಾಟ್ಫಾರಂಗಳ ಕಾಮಗಾರಿಯನ್ನು ಕೈಗೆತ್ತಿಕೊಂಡು ಆರು ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು. ಇದರ ನಿರ್ಮಾಣಕ್ಕೆ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು ಗುತ್ತಿಗೆ ಪ್ರಕ್ರಿಯೆ ಕೂಡ ನಡೆದಿದೆ ಎಂದರು.
ಇನ್ನು ಹೆಚ್ಚುವರಿ ಪ್ಲಾಟ್ಫಾರಂಗಳ ನಿರ್ಮಾಣ ದಿಂದ ಜಿಲ್ಲೆಯ ಜನರ ಬೇಡಿಕೆಗೆ ಅನು ಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈಲು ಗಳನ್ನು ಓಡಿಸಲು ಅನುಕೂಲವಾಗಲಿದೆ ಎಂದು ಹೇಳಿದರು. ರೈಲ್ವೇ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿ ಉಪಸ್ಥಿತರಿದ್ದರು.
ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯಿಂದ ಮನವಿ :
ಮಂಗಳೂರು ಭಾಗದ ವಿವಿಧ ಬೇಡಿಕೆ ಗಳ ಬಗ್ಗೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಸದಸ್ಯರು, ಜಿ.ಎಂ. ಜಾನ್ ಥಾಮಸ್ ಅವರಿಗೆ ಮನವಿ ಸಲ್ಲಿಸಿದರು.
ಅತ್ತಾವರ ಕಡೆಯಿಂದ ಎರಡನೇ ಪ್ರವೇಶ ದ್ವಾರ ಅಭಿವೃದ್ಧಿ, ಮಂಗಳೂರು ಜಂಕ್ಷನ್ (ಗೊಮ್ಮಟೇಶ್ವರ ಎಕ್ಸ್ಪ್ರೆಸ್) ಹಗಲು ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ವರೆಗೆ ಪರಿಷ್ಕೃತ ಸಮಯದೊಂದಿಗೆ ಓಡಿಸಬೇಕು, ರೈಲು ಸಂಖ್ಯೆ 06484/85 ಮತ್ತು 06486/06487 ಮಂಗಳೂರು- ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆಯವರೆಗೆ ವಿಸ್ತರಿಸಬೇಕು, ರೈಲು ಸಂಖ್ಯೆ 12133/34 ಮುಂಬಯಿ ಸಿಎಸ್ಟಿ ಎಕ್ಸ್ಪ್ರೆಸ್ ಅನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸಬೇಕು, ಮತ್ಸ್ಯಗಂಧ ಎಕ್ಸ್ಪ್ರೆಸ್ಗೆ ಮಂಗಳೂರು ಜಂಕ್ಷನ್ನಲ್ಲಿ ನಿಲುಗಡೆ ನೀಡಬೇಕು ಮುಂತಾದ ಬೇಡಿಕೆಗಳನ್ನು ಸಲ್ಲಿಸಲಾಯಿತು. ಬೇಡಿಕೆಗಳನ್ನು ಪರಿಶೀಲಿ ಸುವುದಾಗಿ ಮಹಾಪ್ರಬಂಧಕರು ಭರವಸೆ ನೀಡಿದರು.
ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯರಾದ ಹನುಮಂತ ಕಾಮತ್, ಅಹ್ಮದ್ ಬಾವ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯ ಅನಿಲ್ ಹೆಗ್ಡೆ, ಜಿ.ಕೆ. ಭಟ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post