ಮಂಗಳೂರು: ‘ನನ್ನನ್ನು ಪತಿ ಸ್ವೀಕರಿಸಿ, ಅವರ ಮನೆಗೆ ಸೇರಿಸಿಕೊಳ್ಳಬೇಕೆಂದು ಎರಡು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಯಾವುದೇ ಸ್ಪಂದನೆ ಸಿಗದ ಕಾರಣ ಹೋರಾಟದಿಂದ ಹಿಂದೆ ಸರಿದು ನನ್ನಿಷ್ಟದಂತೆ ಜೀವಿಸಲು ತೀರ್ಮಾನಿಸಿದ್ದೇನೆ’ ಎಂದು ಆಸಿಯಾ ಇಬ್ರಾಹೀಂ ಖಲೀಲ್ ಕಟ್ಟೆಮಾರ್ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೋರಾಟದಲ್ಲಿ ಜಾತಿ, ಮತದ ಭೇದವಿಲ್ಲದೆ ಎಲ್ಲರೂ ಸಹಕರಿಸಿದ್ದಾರೆ. ಹೋರಾಟಕ್ಕೆ ನ್ಯಾಯ ಸಿಗದ ಅಸಮಾಧಾನ ಇದ್ದರೂ, ಮುಂದೆ ಸುಖವಾದ ಜೀವನ ಸಾಗಿಸಲು ನಿರ್ಧರಿಸಿದ್ದೇನೆ’ ಎಂದರು.
ಹಲವು ಹೋರಾಟಗಳ ನಡುವೆಯೂ ಇಬ್ರಾಹಿಂ ಖಲೀಲ್ ಮತ್ತು ಆತನ ಮನೆಯವರು ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದೇ ಇರುವುದರಿಂದ ಮುಂದಕ್ಕೆ ಹೋರಾಟವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ. ಇಬ್ರಾಹಿಂ ಖಲೀಲ್ನಿಂದ ದೂರ ಉಳಿದು ಬದುಕುವ ನಿರ್ಧಾರಕ್ಕೆ ಬಂದಿದ್ದೇನೆ. ಅಲ್ಲದೆ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಎಂದು ಆಸಿಯಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಾತಿ ಮತ ಬೇಧ ಮರೆತು ಅನೇಕ ಹಿಂದೂ, ಮುಸ್ಲಿಂ ಸಂಘಟನೆಗಳು ನನ್ನ ಹೋರಾಟಕ್ಕೆ ಕೈ ಜೋಡಿಸಿ ನಮ್ಮನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಇದ್ಯಾವ ಹೋರಾಟಕ್ಕೂ ಬಗ್ಗದ ಇಬ್ರಾಹಿಂ ಖಲೀಲ್ ನನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ನಿರಂತರವಾಗಿ ಹೋರಾಟ ಮಾಡಿದ್ದು, 43 ದಿನಗಳ ಕಾಲ ಸುಳ್ಯದ ಕಟ್ಟೆಕ್ಕಾರ್ ಕುಟುಂಬದ ಮನೆಯಲ್ಲಿ ವಾಸವಾಗಿದ್ದೆ. ಆದರೆ ನನ್ನ ಮನವಿಗೆ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಇದೀಗ ಅನಿವಾರ್ಯವಾಗಿ ಹೋರಾಟದಿಂದ ಹಿಂದೆ ಸರಿದು ಮುಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅವರು ಪ್ರಕಟಿಸಿದರು.
ನನ್ನಂತಹ ಪರಿಸ್ಥಿತಿ ಯಾವ ಮಹಿಳೆಗೂ ಬರಬಾರದು. ಮದುವೆಯಾಗುವಾಗ ಕೇವಲ ಮಾತಿಗೆ ಮರಳಾಗದೆ ಪರಿಶೀಲನೆ ನಡೆಸಿ, ಸಾಕಷ್ಟು ಯೋಚಿಸಿ ಮುಂದುವರಿಯಿರಿ ಎಂದು ಸಲಹೆ ನೀಡಿದ ಅವರು, ನನ್ನಂತೆ ಹಲವಾರು ಮಹಿಳೆಯರು ಸಂಕಷ್ಟ ಅನುಭವಿಸಿ ನೋವನ್ನು ನುಂಗಿಕೊಂಡು ಜೀವನ ನಡೆಸುತ್ತಿದ್ದಾರೆ. ಅಂತಹಾ ಮಹಿಳೆಯರ ಪರವಾಗಿ ಹೋರಾಟ ನಡೆಸಿ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದೇನೆ ಎಂದು ಆಸಿಯಾ ಹೇಳಿದರು. ಮುಂದಕ್ಕೆ ಈ ಪ್ರಕರಣವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ. ಹಾಗಾಗಿ ಮುಂದೆ ನನ್ನ ವಿಚಾರದಲ್ಲಿ ಯಾರೂ ಹೇಳಿಕೆಗಳನ್ನು ನೀಡಬಾರದು. ನನಗೂ ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಈ ಮೊದಲು ಪೊಲೀಸ್ ಠಾಣೆಯಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ದಾಖಲಿಸಿರುವ ದಾವೆಯನ್ನು ಸ್ವ ಇಚ್ಛೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದರು.
ಮಾತೃ ಧರ್ಮಕ್ಕೆ ಮರಳುವುದಿಲ್ಲ: ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಮಾಡಲು ನಿರ್ಧರಿಸಿದ್ದೇವೆ. ಯಾವುದೇ ಕಾರಣಕ್ಕೂ ಮಾತೃ ಧರ್ಮಕ್ಕೆ ಮರಳುವುದಿಲ್ಲ. ಕೇರಳದ ಕಣ್ಣೂರಿನ ನನ್ನ ಮನೆಯವರು ಇಸ್ಲಾಂ ತೊರೆದು ಮರಳಿ ಬರುವುದಾದರೆ ಮನೆಗೆ ಸೇರಿಸುವುದಾಗಿ ತಿಳಿಸಿದ್ದಾರೆ. ಆದರೆ ನಾನು ಮರಳಿ ಹೋಗುವುದಿಲ್ಲ. ಸದ್ಯಕ್ಕೆ ಸುಳ್ಯದಲ್ಲೇ ಇದ್ದು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
‘ಷರಿಯತ್ ಕಾನೂನಿನ ಪ್ರಕಾರ ನಾನು ವಿವಾಹವಾಗಿದ್ದು, ಮುಂದೆ ನನ್ನಂತೆ ನೊಂದ ಮಹಿಳೆಯರಿಗೆ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯ ಮುಂದುವರಿಸುತ್ತೇನೆ’ ಎಂದರು.