ಮಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ‘ವಿಶೇಷ ಸಮಗ್ರ ಪರಿಷ್ಕರಣೆ (SIR-2026)’ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಹೆಸರು ಪ್ರಕಟವಾದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದು ನಿರಾಳರಾಗುವಂತಿಲ್ಲ. ಕರಡು ಪಟ್ಟಿಯಲ್ಲಿರುವ ಮತದಾರರ ಪೈಕಿ ವಿವರಗಳಲ್ಲಿ ಹೊಂದಾಣಿಕೆಯಾಗದ (No Mapping) ಹಾಗೂ ತಾರ್ಕಿಕ ದೋಷವಿರುವ ಒಟ್ಟು 1,50,153 ಮತದಾರರಿಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಪಡೀಲ್ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ.ದರ್ಶನ್ ಈ ವಿಷಯ ತಿಳಿಸಿದ್ದಾರೆ.
ನೋಟಿಸ್ ಬಂದ ತಕ್ಷಣ ಯಾರೂ ಭಯಪಡುವ ಅಗತ್ಯವಿಲ್ಲ. ಇದು ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದಕ್ಕಲ್ಲ, ಬದಲಿಗೆ ದಾಖಲೆಗಳನ್ನು ಸಲ್ಲಿಸಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ನೀಡಲಾಗಿರುವ ಕಾನೂನುಬದ್ಧ ಅವಕಾಶ ಎಂದು ಸ್ಪಷ್ಟಪಡಿಸಿದರು.
ನೋಟಿಸ್ ಹೇಗೆ ನೀಡಲಾಗುತ್ತದೆ?, ಮತದಾರರು ಏನು ಮಾಡಬೇಕು?
- ಮನೆ ಬಾಗಿಲಿಗೆ ಬರಲಿದೆ ನೋಟಿಸ್: ಆನ್ಲೈನ್ನಲ್ಲಿ ಜನರೇಟ್ ಆಗುವ ನೋಟಿಸ್ಗಳನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮತದಾರರ ಮನೆ ಬಾಗಿಲಿಗೆ ಖುದ್ದಾಗಿ ತಲುಪಿಸಲಿದ್ದಾರೆ. ಮತದಾರರು ಮನೆಯಲ್ಲಿ ಲಭ್ಯವಿಲ್ಲದಿದ್ದರೆ ಮನೆಗೆ ಅಂಟಿಸಿ ಫೋಟೋ ಸಹಿತ ಮಹಜರು ಮಾಡಲಾಗುತ್ತದೆ.
- ಗ್ರಾಮ ಪಂಚಾಯತ್ ಮಟ್ಟದಲ್ಲೇ ವಿಚಾರಣೆ: ಮತದಾರರು ತಾಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಲು ಜಿಲ್ಲೆಯ 154 ಗ್ರೂಪ್-ಬಿ ದರ್ಜೆಯ ಅಧಿಕಾರಿಗಳನ್ನು ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನಾಗಿ (AERO) ನೇಮಿಸಲಾಗುತ್ತಿದೆ. ಇವರು ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ಮತದಾರರ ವಿಚಾರಣೆ ನಡೆಸಲಿದ್ದಾರೆ ಎಂದರು.
- ಮತ್ತೊಂದು ದಿನಾಂಕದ ಅವಕಾಶ: ನೋಟಿಸ್ ತಲುಪಿದ ಬಳಿಕ ನಿಗದಿತ ದಿನಾಂಕದಂದು ದಾಖಲೆಗಳೊಂದಿಗೆ ಹಾಜರಾಗಬೇಕು. ಅನಿವಾರ್ಯ ಕಾರಣಗಳಿಂದ ಮೊದಲ ದಿನ ಹಾಜರಾಗಲು ಸಾಧ್ಯವಾಗದಿದ್ದರೆ ಮತ್ತೊಂದು ವಿಚಾರಣಾ ದಿನಾಂಕವನ್ನು ನೀಡಲಾಗುತ್ತದೆ ಎಂದರು.
- ಸಲ್ಲಿಸಬೇಕಾದ ದಾಖಲೆಗಳು (Indicative Documents): ಮತದಾರರ ಜನನ ದಿನಾಂಕ ಹಾಗೂ ಸ್ಥಳವನ್ನು ದೃಢೀಕರಿಸಲು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು.
- 01.07.1987ಕ್ಕಿಂತ ಮೊದಲು ಜನಿಸಿದವರು: ಸ್ವಂತ ಜನನ/ನಿವಾಸ ದೃಢೀಕರಿಸುವ ಒಂದು ದಾಖಲೆ.
- 01.07.1987ರಿಂದ 02.12.2004 ರೊಳಗೆ ಜನಿಸಿದವರು: ಸ್ವಂತ ಜನನ ದಾಖಲೆಯ ಜೊತೆಗೆ ತಂದೆ ಅಥವಾ ತಾಯಿಯ ಒಂದು ದಾಖಲೆ.
- 02.12.2004ರ ನಂತರ ಜನಿಸಿದವರು: ಸ್ವಂತ ದಾಖಲೆಯೊಂದಿಗೆ ತಂದೆ ಮತ್ತು ತಾಯಿ ಇಬ್ಬರ ದಾಖಲೆಗಳು.
- ಮಾನ್ಯ ಮಾಡುವ ದಾಖಲೆಗಳು: ಜಾತಿ ಪ್ರಮಾಣಪತ್ರ, ಎಸ್ಎಸ್ಎಲ್ಸಿ/ಮೆಟ್ರಿಕ್ಯುಲೇಷನ್ ಅಂಕಪಟ್ಟಿ, ಪಾಸ್ಪೋರ್ಟ್, ಚಾಲನಾ ಪರವಾನಗಿ, ಪಿಂಚಣಿ ಪಾವತಿ ಆದೇಶ (PPO), ಜನನ ಪ್ರಮಾಣಪತ್ರ, ಕುಟುಂಬ ನೋಂದಣಿ ಪುಸ್ತಕ, ಅಥವಾ ವಾಸಸ್ಥಳ ದೃಢೀಕರಿಸುವ ಇತರೆ ಯಾವುದೇ ಪೂರಕ ದಾಖಲೆಗಳು.
ವಿಧಾನಸಭಾ ಕ್ಷೇತ್ರವಾರು ನೋಟಿಸ್
- ಬೆಳ್ತಂಗಡಿ : 12,457
- ಮೂಡುಬಿದಿರೆ : 21,843
- ಮಂಗಳೂರು ನಗರ ಉತ್ತರ : 27,915
- ಮಂಗಳೂರು ನಗರ ದಕ್ಷಿಣ : 35,188
- ಮಂಗಳೂರು (ಉಳ್ಳಾಲ) : 18,349
- ಬಂಟ್ವಾಳ : 9,049
- ಪುತ್ತೂರು : 12,333
- ಸುಳ್ಯ: 13,019
- ಒಟ್ಟು 1,50,153
ಕರಡು ಪಟ್ಟಿಯಿಂದ 1.57 ಲಕ್ಷ ಮಂದಿ ಹೊರಕ್ಕೆ (UEF): ಮೃತಪಟ್ಟ 45,318 ಮಂದಿ, ಕಾಯಂ ಆಗಿ ವಲಸೆ ಹೋದ 82,988 ಮಂದಿ, ಬೇರೆಡೆ ಈಗಾಗಲೇ ಹೆಸರು ನೋಂದಾಯಿಸಿದ 15,395 ಮಂದಿ ಹಾಗೂ ಗೈರುಹಾಜರಾದ 11,124 ಮಂದಿ ಸೇರಿದಂತೆ ಒಟ್ಟು 1,57,379 ಮಂದಿಯ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ ಕರಡು ಪಟ್ಟಿಯಲ್ಲಿ 16,46,387 ಮತದಾರರ ಹೆಸರು ಡಿಜಿಟಲೀಕರಣಗೊಂಡಿದೆ ಎಂದು ಜಿಲ್ಲಾಧಿಕಾರಿ ಹೆಚ್.ವಿ.ದರ್ಶನ್ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post