ಉಳ್ಳಾಲ: ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ 1501 ನೇ ಜನ್ಮದಿನಾಚರಣೆ ಆ. 25ಮಂಗಳವಾರ ನಡೆಯಲಿದೆ. ಈ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ 7.30 ಕ್ಕೆ ಕೋಟೆಪುರದಿಂದ ಆರಂಭಗೊಳ್ಳಲಿದ್ದು, ಈ ಜಾಥಾ ವು ಚೋಟಾ ಮಂಗಳೂರು, ಪೇಟೆ, ಮುಕ್ಕಚ್ಚೇರಿ, ಆಝಾದ್ ನಗರ ರಸ್ತೆಯಾಗಿ ಮೇಲಂಗಡಿ ಮೂಲಕ ದರ್ಗಾಕ್ಕೆ ತಲುಪಲಿದೆ. ಈದ್ ಮಿಲಾದ್ ಜಾಥ ಸಂದರ್ಭದಲ್ಲಿ ಬೈಕ್ ಗೆ ಹಸಿರು ಧ್ವಜ ಕಟ್ಟುವುದು, ಅನಗತ್ಯ ದ್ವಿಚಕ್ರ ವಾಹನ ರ್ಯಾಲಿ ನಡೆಸುವುದಕ್ಕೆ ಅವಕಾಶ ಇರುವುದಿಲ್ಲವೆಂದು ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸ್ಪಷ್ಟಪಡಿಸಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಪ್ರವಾದಿ ಮುಹಮ್ಮದರ 1501ನೇ ಜನ್ಮ ದಿನಾಚರಣೆ ಪ್ರಯುಕ್ತ ಕೋಟೆಪುರದಿಂದ ಆರಂಭಗೊಳ್ಳುವ ಕಾಲ್ನಡಿಗೆ ಜಾಥಾವು 9.30 ಗಂಟೆಗೆ ದರ್ಗಾದಲ್ಲಿ ನಡೆಯುವ ಝಿಯಾರತ್ ಹಾಗೂ ಸಂದೇಶದೊಂದಿಗೆ ಸಮಾಪನ ಗೊಳ್ಳಲಿದೆ. ಜಾಥಾದಲ್ಲಿ ಸಚಿವ ಯು.ಟಿ ಖಾದರ್, ದರ್ಗಾ ಅಧೀನದಲ್ಲಿ ಬರುವ 27 ಮೊಹಲ್ಲಾಗಳ ವ್ಯಾಪ್ತಿಯ 34 ಮದ್ರಸ, ಮಸೀದಿಗಳ ಖತೀಬರು, ಮುಅಲ್ಲಿಂಗಳು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಜಾಥದಲ್ಲಿ ಪ್ರವಾದಿ ಜನ್ಮ ದಿನದ ಘೋಷಣೆ ಮಾಡುವ ಒಂದು ಜೀಪು, ಪ್ರವಾದಿ ಕೀರ್ತನೆಯ ಹಾಡುಗಳನ್ನು ಆಲಾಪಿಸುವ ಒಂದು ಟ್ರಕ್ ಮಾತ್ರ ಇರಲಿದೆ. ಉಳಿದ ಯಾವುದೇ ಘೋಷಣೆಗಳಿಗಾಗಲಿ, ಅನಧಿಕೃತ ವಾಹನಗಳಿಗೆ ಅವಕಾಶ ಇರೋದಿಲ್ಲ. ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಜಾಥಾ ನಡೆಸಲಾಗುವುದೆಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಉಳ್ಳಾಲ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ಧೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಕೋಶಾಧಿಕಾರಿ ನಾಝೀಮ್ ಮುಕ್ಕಚೇರಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post