ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಅಂತಾರಾಜ್ಯ ಖದೀಮರನ್ನು ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ವೊಬ್ಬರ ಸಮಯಪ್ರಜ್ಞೆಯಿಂದಾಗಿ ವೃದ್ಧೆ ಮತ್ತಷ್ಟು ಹಣ ಕಳೆದುಕೊಳ್ಳುವುದು ತಪ್ಪಿದ್ದಲ್ಲದೆ, ಈ ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಶಿವಾಜಿನಗರದ ನಿವಾಸಿಯಾದ ಲಕ್ಷ್ಮೀ ಎಂಬ ವೃದ್ಧೆ ಇತ್ತೀಚೆಗೆ ಪ್ರಾಪರ್ಟಿ ಮಾರಾಟದಿಂದ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದರು. ಅವರ ಬ್ಯಾಂಕ್ ವಹಿವಾಟಿನ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಸೈಬರ್ ವಂಚಕರು, ಅಕ್ರಮ ಹಣ ವರ್ಗಾವಣೆ ಆರೋಪದಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಹೆದರಿಸಿದ್ದರು. ಕಾನೂನು ಕ್ರಮದ ಭಯ ಬಿದ್ದಿದ್ದ ಲಕ್ಷ್ಮೀ ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಹಂತಹಂತವಾಗಿ ಒಟ್ಟು 24 ಕೋಟಿ ರೂಪಾಯಿಯನ್ನು ಖದೀಮರಿಗೆ ವರ್ಗಾಯಿಸಿದ್ದರು.
ಇಷ್ಟಾದರೂ ವಂಚಕರ ಹಣದ ದಾಹ ತೀರಿರಲಿಲ್ಲ. ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಾಗ, ವೃದ್ಧೆ ಲಕ್ಷ್ಮೀ ಅವರು ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಪಡೆಯಲು ಬ್ಯಾಂಕ್ಗೆ ತೆರಳಿದ್ದರು. ವೃದ್ಧೆಯ ವರ್ತನೆ ಹಾಗೂ ಪದೆ ಪದೇ ದೊಡ್ಡ ಮೊತ್ತದ ವ್ಯವಹಾರ ನಡೆಸುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ಬ್ಯಾಂಕ್ ಶಾಖೆಯ ಮ್ಯಾನೇಜರ್ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕ್ಗೆ ಧಾವಿಸಿದ ಸಿಸಿಬಿ ಸೈಬರ್ ಪೊಲೀಸರು ಲಕ್ಷ್ಮೀ ಅವರನ್ನು ವಿಚಾರಣೆಗೊಳಪಡಿಸಿದರು. ಆರಂಭದಲ್ಲಿ ತೀವ್ರ ಭಯದಿಂದ ಏನನ್ನೂ ಬಾಯ್ಬಿಡದ ವೃದ್ಧೆಗೆ ಧೈರ್ಯ ತುಂಬಿ, ಪೊಲೀಸರು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದಾಗ ‘ಡಿಜಿಟಲ್ ಅರೆಸ್ಟ್’ ನ ಅಸಲಿ ಸತ್ಯ ಹೊರಬಂದಿದೆ. ಕೂಡಲೇ ಸಂತ್ರಸ್ತೆಯಿಂದ ದೂರು ದಾಖಲಿಸಿಕೊಂಡ ಪೊಲೀಸರು, ವಿದೇಶದಲ್ಲಿರುವ ಅವರ ಮಕ್ಕಳಿಗೆ ವಿಷಯ ಮುಟ್ಟಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಿಳಿದ ಖಾಕಿ ಪಡೆ, ಮುಂಬೈ, ಅಲಹಾಬಾದ್ ಮತ್ತು ದೆಹಲಿ ಮೂಲದ ಆರೋಪಿಗಳ ಬೆನ್ನುಬಿದ್ದು ಗೌರವ್ ಕುಮಾರ್, ಓಂ ಪ್ರಕಾಶ್ ರಾಜ್ಪುತ್ ಸೇರಿದಂತೆ ಐವರು ಖದೀಮರನ್ನು ಹೆಡೆಮುರಿ ಕಟ್ಟಿದ್ದಾರೆ. ವಂಚಕರು ಸುಲಿಗೆ ಮಾಡಿದ್ದ ಹಣವನ್ನು ಒಟ್ಟು 22 ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು, ಸದ್ಯಕ್ಕೆ 60 ಲಕ್ಷ ರೂಪಾಯಿ ಹಣವಿದ್ದ ಖಾತೆಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಉಳಿದ ಹಣ ಜಪ್ತಿಗಾಗಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post