ಮಂಗಳೂರು: ‘ಯಾರದೋ ಮಕ್ಕಳ ಮೇಲೆ ವಿನಾಕಾರಣ ಹಲ್ಲೆ ನಡೆಸುವ ರೌಡಿಗಳ ಅಟ್ಟಹಾಸವು ದಕ್ಷಿಣ ಕನ್ನಡ ಜಿಲ್ಲೆಗೆ ಕಪ್ಪುಚುಕ್ಕೆಯಾಗಿದೆ. ಇದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ಆರ್ಥಿಕ ಪ್ರಗತಿ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುರತ್ಕಲ್ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಕಾನೂನಿನ ಭಯವಿಲ್ಲದೆ ರೌಡಿಗಳು, ಆಡಳಿತ ಪಕ್ಷದ ಕುಮ್ಮಕ್ಕಿನಿಂದ ಈ ರೀತಿ ಕೃತ್ಯ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಆಡಳಿತ ಪಕ್ಷದ ಅಡಿಯಾಳಾಗದೆ, ಕಾನೂನಿನ ಮೂಲಕ ದುಷ್ಕರ್ಮಿಗಳ ಮೇಲೆ ಕ್ರಮವಹಿಸಬೇಕು’ ಎಂದರು.
ಸಂಬಂಧ ಇಲ್ಲದವರು ಯಾರ್ಯಾರ ಮಕ್ಕಳಿಗೆ ಹೊಡೆಯುತ್ತಿದ್ದಾರೆ. ಈ ರೀತಿ ಆದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಪೊಲೀಸ್ ಇಲಾಖೆಯ ಮುಂದೆಯೇ ಹೊಡಿಯುತ್ತಾರೆ. ಹೊಡಿಯಬೇಡಿ ಎಂದು ಪೊಲೀಸರು ಅಂಗಲಾಚುವ ವಿಡಿಯೋ ವೈರಲ್ ಆಗುತ್ತಿದೆ. ಪೊಲೀಸ್ ಇಲಾಖೆಯ ಲಾಠಿ ಎಲ್ಲಿ ಹೋಯಿತು?. ಪೊಲೀಸರು ಲಾಠಿ ಬಿಟ್ಟರೆ ಜನರು ಲಾಠಿ ಹಿಡಿದು ತಿರುಗುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ದಾಳಿ ಮಾಡಿದವರ ಮೇಲೆ ಪೊಲೀಸ್ ಇಲಾಖೆ ಯಾವ ಕೇಸ್ ಹಾಕಿದೆ?” ಎಂದು ಪ್ರಶ್ನಿಸಿದ್ದಾರೆ.
ಪೆಟ್ಟು ತಿಂದವರು ಬಂದು ಪ್ರಕರಣ ದಾಖಲಿಸಬೇಕು ಎಂಬುದು ಸರಿಯಲ್ಲ. ಯಾವ ಹೆಣ್ಣು ಮಕ್ಕಳು ಠಾಣೆಗೆ ಬಂದು ದೂರು ನೀಡುತ್ತಾರೆ. ಆ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ನೀಡುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗಿಲ್ಲ. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಬಹುದಿತ್ತು. ಯಾಕಾಗಿ ಈ ಕಾರ್ಯ ಆಗಿಲ್ಲ. ಪೊಲೀಸರು ಕಠಿಣ ಕ್ರಮ ಕೈಗೊಂಡಾಗ ಮಾತ್ರ ರೌಡಿಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.
ಪ್ರಮುಖರಾದ ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ, ಮುರಳಿ ನರಿಂಗಾನ ಇದ್ದರು.
Discussion about this post