ಮಂಗಳೂರು, ನ.11: ಉಪ್ಪಳ ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸುತ್ತಿದ್ದ ನಟೋರಿಯಸ್ ಗ್ಯಾಂಗ್ ಲೀಡರ್ ಕಾಲಿಯಾ ರಫೀಕ್ ಮತ್ತು ಡಾನ್ ತಸ್ಲೀಮ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ಮತ್ತು ಕಾಸರಗೋಡು ಪೊಲೀಸರಿಗೆ ಬೇಕಾಗಿದ್ದ ಆರೋಪಿ, ಅದೇ ಗ್ಯಾಂಗ್ ಸದಸ್ಯ ಜಿಯಾನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕೇರಳ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಮುಂಬೈಯಲ್ಲಿ ಗುರುವಾರ ರಾತ್ರಿ ಬಂಧಿಸಿದೆ.
ಐದು ವರ್ಷಗಳ ಹಿಂದೆ ಕೋಟೆಕಾರಿನಲ್ಲಿ ನಡೆದಿದ್ದ ಉಪ್ಪಳದ ಗ್ಯಾಂಗ್ ಲೀಡರ್ ಕಾಲಿಯಾ ರಫೀಕ್ ನನ್ನು ಅಟ್ಟಾಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಕೆಲವರನ್ನು ಬಂಧಿಸಿದ್ದರೆ ಪ್ರಮುಖ ಆರೋಪಿಯಾಗಿದ್ದ ಜಿಯಾ ತಪ್ಪಿಸಿಕೊಂಡಿದ್ದ. ಆನಂತರ, ಉಪ್ಪಳ ಮೂಲದ ಡಾನ್ ತಸ್ಲಿಂ ಎಂಬಾತನ್ನೂ ಕೊಲ್ಲಲಾಗಿತ್ತು. ಇದಲ್ಲದೆ, ಬಾಲಿಕಾ ಅಜೀಜ್ ಕೊಲೆ ಪ್ರಕರಣದಲ್ಲಿಯೂ ಮಂಜೇಶ್ವರ ಪೊಲೀಸರಿಗೆ ಜಿಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಟ್ಲ ಬಳಿಯ ಕೇರಳ ಗಡಿಭಾಗ ಕನ್ಯಾನದಲ್ಲಿ ನಡೆದ ಆಸೀಫ್ ಬಾಯಿಕಟ್ಟೆ ಕೊಲೆ ಪ್ರಕರಣದಲ್ಲಿಯೂ ಜಿಯಾ ಆರೋಪಿಯಾಗಿದ್ದ. ಪೈವಳಿಕೆ ನಿವಾಸಿಯಾಗಿರುವ ಜಿಯಾ, ಪ್ರಕರಣದ ಬಳಿಕ ವಿದೇಶಕ್ಕೆ ತೆರಳಿ ಅಲ್ಲಿಯೇ ತಲೆಮರೆಸಿಕೊಂಡಿದ್ದ.
ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಝಿಯಾ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ. ಆತ ಹಿಂತಿರುಗಿ ಬರುವ ಮಾಹಿತಿ ಪಡೆದ ಎಟಿಎಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
Discussion about this post