ಮಂಗಳೂರು: ನಗರದ ಲೇಡಿಹಿಲ್ ಬಳಿ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐದು ಮಂದಿಗೆ ಕಾರು ಢಿಕ್ಕಿಯಾಗಿ ಓರ್ವ ಯುವತಿ ದಾರುಣವಾಗಿ ಮೃತಪಟ್ಟ ಭೀಕರ ಅಪಘಾತ ಬುಧವಾರ (ಅ18) ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದೆ.
ಅಪಘಾತದಲ್ಲಿ ರೂಪಶ್ರೀ (23) ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುರತ್ಕಲ್ ನ ಕಾನ, ಬಾಳದ ಗಂಗಾಧರ್ ಅವರ ಪುತ್ರಿಯಾದ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರೆಂದು ತಿಳಿದುಬಂದಿದೆ. ಸ್ವಾತಿ(26) ಹಿತಾನ್ವಿ(16), ಕೃತಿಕಾ(16), ಯತಿಕಾ(12) ಗಂಭೀರ ಗಾಯಗೊಂಡ ಇತರ ನಾಲ್ವರು ಯುವತಿಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬುಧವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಕಾರು ಮಣ್ಣಗುಡ್ಡ ಕಡೆಯಿಂದ ಲೇಡಿಹಿಲ್ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷ್ಯದ ದ ಚಾಲನೆಯೊಂದಿಗೆ ಬಂದಿದ್ದು ಎಸ್ ಎಲ್ ಶೇಟ್ ಜ್ಯುವೆಲ್ಲರಿ ಬಳಿ ಫುಟ್ ಪಾತಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಹಾರಿಸಿಕೊಂಡು ಹೋಗಿದ್ದಾನೆ,
ಅಪಘಾತ ನಡಸಿದ ಬಳಿಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಿದ್ದ ಚಾಲಕ ಕಮಲೇಶ್ ಬಲದೇವ್ ಕಾರನ್ನು ಹೋಂಡಾ ಶೋ ರೂಂ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದಾನೆ. ಬಳಿಕ ತಂದೆ ಹೆಚ್ಎಂ ಬಲದೇವ್ ಅವರೊಂದಿಗೆ ಪಶ್ಚಿಮ ಸಂಚಾರಿ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಅಪಘಾತ ಭೀಕರ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
Discussion about this post