ಮಂಗಳೂರು : ನವ ಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ವತಿಯಿಂದ12ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಉತ್ಸಾಹಭರಿತವಾಗಿ ಆಚರಿಸಲಾಯಿತು. ಅಧಿಕಾರಿಗಳು, ನೌಕರರು, ಸಿಐಎಸ್ಎಫ್ ಸಿಬ್ಬಂದಿ, ಕುಟುಂಬ ಸದಸ್ಯರು, ಬಂದರು ಬಳಕೆದಾರರು ಹಾಗೂ ವಿವಿಧ ಪಾಲುದಾರರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಆರೋಗ್ಯಕರ ಹಾಗೂ ಸಮತೋಲಿತ ಜೀವನಶೈಲಿಯತ್ತ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಎನ್ಎಂಪಿಎ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಜಿಜೋ ಥಾಮಸ್, ಕಾರ್ಯದರ್ಶಿ; ಶ್ರೀ ವೀರರಾಗವನ್, ಮುಖ್ಯ ಲೆಕ್ಕಾಧಿಕಾರಿ; ಶ್ರೀ ದೀಪಕ್ ರಾಥ್, ಮುಖ್ಯ ಯಾಂತ್ರಿಕ ಅಭಿಯಂತರರು; ಶ್ರೀ ಕೆ. ರಾಜೇಂದ್ರ ಕುಮಾರ್, ಸಂಚಾರ ವ್ಯವಸ್ಥಾಪಕರು; ಡಾ. ಸುರೇಖಾ ಹೊಸಕೇರಿ, ಮುಖ್ಯ ವೈದ್ಯಾಧಿಕಾರಿ; ಶ್ರೀ ರಾಜೇಂದ್ರ ಪಿ. ಪಾಠಕ್, ಉಪ ಕಮಾಂಡೆಂಟ್, ಸಿಐಎಸ್ಎಫ್; ಶ್ರೀ ಕಿಶೋರ್ ಸುವರ್ಣ, ಯೋಗ ತರಬೇತುದಾರರು; ಶ್ರೀ ಜಗದೀಶ್ ಸನಿಲ್, ಎನ್ಎಂಪಿಎ ಮಂಡಳಿ ಸದಸ್ಯರು; ಶ್ರೀ ಯೋಗೇಂದ್ರ, ಅಧೀಕ್ಷಕ ಅಭಿಯಂತರರು (ಸಿವಿಲ್); ಹಾಗೂ ಶ್ರೀಮತಿ ವಿಶಾಲಾಕ್ಷಿ, ಹಿರಿಯ ಉಪ ಕಾರ್ಯದರ್ಶಿ ಉಪಸ್ಥಿತರಿದ್ದರು.


ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಯೋಗ ದಿನಕ್ಕೆ ಪೂರ್ವಭಾವಿಯಾಗಿ ಎನ್ಎಂಪಿಎ ವತಿಯಿಂದ ಹಡಗುಗಳ ಮೇಲೆ, ವಾರ್ಫ್ ಪ್ರದೇಶದಲ್ಲಿ ಹಾಗೂ ಅಂತರರಾಷ್ಟ್ರೀಯ ಕ್ರೂಸ್ ಲೌಂಜ್ನಲ್ಲಿ ವಿಶೇಷ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಯೋಗವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಆರೋಗ್ಯ, ಸಾಮರಸ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಉತ್ತೇಜಿಸುತ್ತದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮಗಳು ಸಾರಿದವು.
ವಾರಪೂರ್ತಿ ನಡೆದ ಯೋಗ ಚಟುವಟಿಕೆಗಳಲ್ಲಿ ನೌಕರರು, ಬಂದರು ಬಳಕೆದಾರರು, ಸಮುದ್ರೋದ್ಯಮ ವೃತ್ತಿಪರರು ಹಾಗೂ ವಿವಿಧ ಪಾಲುದಾರರು ಉತ್ಸಾಹದಿಂದ ಭಾಗವಹಿಸಿದ್ದು, ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ, ಒತ್ತಡ ನಿರ್ವಹಣೆ ಮತ್ತು ಆರೋಗ್ಯಕರ ಕಾರ್ಯಸಂಸ್ಕೃತಿಯನ್ನು ಉತ್ತೇಜಿಸುವ ಎನ್ಎಂಪಿಎಯ ಬದ್ಧತೆಯನ್ನು ಪ್ರತಿಬಿಂಬಿಸಿತು.
ಇಂದಿನ ದಿನದ ಮುಖ್ಯ ಆಕರ್ಷಣೆಯಾಗಿ“ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ”ಎಂಬ ಧ್ಯೇಯವಾಕ್ಯದಡಿ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಅಧಿಕಾರಿಗಳು, ನೌಕರರು, ಸಿಬ್ಬಂದಿ, ಸಿಐಎಸ್ಎಫ್ ಸಿಬ್ಬಂದಿ, ಕುಟುಂಬ ಸದಸ್ಯರು ಹಾಗೂ ಬಂದರು ಪಾಲುದಾರರು ಒಗ್ಗೂಡಿ ಯೋಗಾಭ್ಯಾಸ ನಡೆಸುವ ಮೂಲಕ ಆರೋಗ್ಯ ಮತ್ತು ಸಾಮರಸ್ಯದ ಸಂದೇಶವನ್ನು ಸಾರಿದರು.


ತರಬೇತುದಾರರ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಉಸಿರಾಟ ವ್ಯಾಯಾಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಯೋಗದ ಮೂಲಕ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಆಂತರಿಕ ಸಮತೋಲನವನ್ನು ಸಾಧಿಸುವ ಮಹತ್ವವನ್ನು ಪ್ರತಿಪಾದಿಸಲಾಯಿತು. ಕಾರ್ಯಕ್ರಮವು“ಒಂದು ಭೂಮಿ – ಒಂದು ಆರೋಗ್ಯ” (Yoga for One Earth, One Health)ಎಂಬ ಅಂತರರಾಷ್ಟ್ರೀಯ ಯೋಗ ದಿನದ ಸಂದೇಶವನ್ನೂ ಪ್ರತಿಧ್ವನಿಸಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದಶ್ರೀಮತಿ ಎಸ್. ಶಾಂತಿ, ಉಪಾಧ್ಯಕ್ಷರು, ಎನ್ಎಂಪಿಎ, ದೈಹಿಕ ಆರೋಗ್ಯ, ಮಾನಸಿಕ ಸ್ಥೈರ್ಯ ಹಾಗೂ ಸಮಗ್ರ ಸುಖ ಜೀವನಕ್ಕಾಗಿ ಯೋಗವನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳುವಂತೆ ಕರೆ ನೀಡಿದರು. ಯೋಗ ದಿನಾಚರಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಎನ್ಎಂಪಿಎ ಕುಟುಂಬವನ್ನು ಅವರು ಅಭಿನಂದಿಸಿ, ಆರೋಗ್ಯಕರ, ಉತ್ಪಾದಕ ಮತ್ತು ಸಾಮರಸ್ಯಯುತ ಕಾರ್ಯ ವಾತಾವರಣವನ್ನು ನಿರ್ಮಿಸುವಲ್ಲಿ ಬಂದರು ಪ್ರಾಧಿಕಾರವು ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ, ಯೋಗವನ್ನು ಜೀವನಶೈಲಿಯಾಗಿ ಅಳವಡಿಸಿಕೊಂಡು ಆರೋಗ್ಯಕರ ಮತ್ತು ಸಮತೋಲಿತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವ ಸಂಕಲ್ಪವನ್ನು ಭಾಗವಹಿಸಿದವರು ವ್ಯಕ್ತಪಡಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post