ತಿರುವನಂತಪುರಂ:ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, ಕೇರಳದ ಜೊತೆ ಗಡಿ ಹಂಚಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹಂದಿ ಫಾರಂಗಳಲ್ಲಿ ಶುಚಿತ್ವಕ್ಕೆ ಪಶು ವೈದ್ಯಕೀಯ ಇಲಾಖೆ ಸೂಚನೆ ನೀಡಿದ್ದು, ಲಸಿಕೆ ನೀಡುವ ಪ್ರಕ್ರಿಯೆ ಕೂಡ ಶುರು ಮಾಡಿದೆ. ಕೇರಳದ ಕಣ್ಣೂರು ಜಿಲ್ಲೆಯ ಎರಡು ಹಂದಿ ಫಾರಂಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಎರಡು ಫಾರಂಗಳ ಹಂದಿಗಳನ್ನು ಕೊಲ್ಲುವಂತೆ ಆದೇಶಿಸಲಾಗಿದೆ.
ಕೇರಳದ ಕನಿಚಾರ್ ಗ್ರಾಮದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರದಲ್ಲಿರುವ ಹಂದಿಗಳಲ್ಲಿ ಏಕಾಏಕಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಹಾಗೂ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿರುವ ಮತ್ತೂಂದು ಸಾಕಾಣಿಕಾ ಕೇಂದ್ರದ ಎಲ್ಲ ಹಂದಿಗಳನ್ನೂ ಕೊಲ್ಲಲಾಗಿದೆ.
ಅನಾರೋಗ್ಯ ಪೀಡಿತವಾಗಿದ್ದ ಹಂದಿಗಳನ್ನು ಪರೀಕ್ಷಿಸಿದ ಬಳಿಕ ಆಫ್ರಿಕನ್ ಹಂದಿಜ್ವರದ ಸೋಂಕು ಹರಡಿರುವುದನ್ನು ಪಶು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಸಾಕಣೆ ಕೇಂದ್ರಗಳಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಶಿಷ್ಟಾಚಾರದಂತೆ ಅವುಗಳನ್ನು ಕೊಲ್ಲಲಾಗಿದೆ.
ಇನ್ನು ಕೇಂದ್ರದ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯನ್ನು ಸೋಂಕು ಪತ್ತೆಯಾದ ಪ್ರದೇಶವೆಂದು ಘೋಷಿಸಿ 10 ಕಿ.ಮೀ. ವ್ಯಾಪ್ತಿಯನ್ನು ಕಣ್ಗಾವಲಿಗೆ ಒಳಪಡಿಸಲಾಗಿದೆ. ಈ ಪ್ರದೇಶದಲ್ಲಿ ಮುಂದಿನ 3 ತಿಂಗಳವರೆಗೆ ಹಂದಿಗಳ ಮಾಂಸ ಮಾರಾಟ, ಸಾಗಣೆ ನಿಷೇಧಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
Discussion about this post