ಬಂಟ್ವಾಳ, ಆಗಸ್ಟ್ 27: ಅನ್ಯಕೋಮಿನ ಯುವಕರ ಜೊತೆ ವಿದ್ಯಾರ್ಥಿನಿಯರು ಕಾರಿಂಜೇಶ್ವರ ದೇವಸ್ಥಾನದ ಬೆಟ್ಟಕ್ಕೆ ವಿಹಾರ ತೆರಳಿದ್ದ ವೇಳೆ ಹಿಂದು ಸಂಘಟನೆಯ ಯುವಕರು ತಡೆದು ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ್ದು ಘಟನೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಹಲ್ಲೆ ನಡೆಸಿದ ಘಟನೆ ಬಗ್ಗೆ ಐವರು ಯುವಕರ ವಿರುದ್ದ ವಿದ್ಯಾರ್ಥಿನಿಯೊಬ್ಬಳು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದು, ಮೂವರು ಅನ್ಯಕೋಮಿನ ವಿದ್ಯಾರ್ಥಿಗಳ ಜೊತೆ ಮೂವರು ವಿದ್ಯಾರ್ಥಿನಿಯರು ಮಂಗಳೂರಿನಿಂದ ಬೈಕ್ನಲ್ಲಿ ಕಾರಿಂಜ ದೇವಾಲಯಕ್ಕೆ ಬಂದಿದ್ದರು.
ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿರುವ ವಿದ್ಯಾರ್ಥಿನಿ, ಪ್ರವಾಸ ಬಂದಿದ್ದ ನಮ್ಮ ಮೇಲೆ 5 ಮಂದಿ ಅಪರಿಚಿತರು ತಡೆದಿದ್ದು ವಿಚಾರಣೆ ನೆಪದಲ್ಲಿ ಅಶ್ಲೀಲ ಶಬ್ಧಗಳಿಂದ ಬೈದು ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ ನಮ್ಮ ಜೊತೆ ಬಂದಿದ್ದ ಯುವಕರಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಳು.
ಹಿಂದು ಸಂಘಟನೆಯ ಕಾರ್ಯಕರ್ತರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 143, 147, 341ಮತ್ತು 149 ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಮೂವರು ಯುವಕರನ್ನು ಬಂಧಿಸಿ ಕ್ರಮ ಜರಗಿಸಿದ್ದಾರೆ.
Discussion about this post