ಮಂಗಳೂರು: ಎಸ್ ಡಿಪಿಐ ‘ಜನಾಧಿಕಾರ’ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಸೇರಿ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಇನೋಳಿ ನಿವಾಸಿಗಳಾದ ನೌಷಾದ್ (28), ಹೈದರಾಲಿ (27) ಬಂಧಿತ ಆರೋಪಿಗಳು. ಆರೋಪಿಗಳಿಗೆ ಆಶ್ರಯ ನೀಡಿದ ಮಂಗಳೂರು ಪಾಂಡೇಶ್ವರ ನಿವಾಸಿ ಮೊಹಮ್ಮದ್ ಸಯ್ಯದ್ ಅಫ್ರೀದ್ (23), ಕೋಣಾಜೆ ನಿವಾಸಿ ಬಶೀರ್ (40), ಮಂಗಳೂರು ಇನೋಳಿ ನಿವಾಸಿ ಬುಬೇರ್ (32), ಪುತ್ತೂರಿನ ಜಲೀಲ್ (25) ಹಾಗೂ ಪೊಲೀಸರ ತನಿಖೆಗೆ ಅಡ್ಡಿ ಪಡಿಸಿದ್ದ ವಿಟ್ಲ ನಿವಾಸಿ ಮೊಹಮ್ಮದ್ ಯಾಸೀನ್ (25), ಅಫ್ರೀದ್ ಸಾಗ್ (19), ಮಂಗಳೂರಿನ ಶಿವಭಾಗ್ ನಿವಾಸಿ ಮೊಹಮ್ಮದ್ ತುಫೇಲ್ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲಿ ನಡೆದ್ದದ್ದು ಏನು? : ಎಸ್ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದ, ಆರೋಪಿಗಳ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳವಾರ ಆರೋಪಿಗಳನ್ನು ಮತ್ತು ಅವರಿಗೆ ಆಶ್ರಯ ನೀಡಿದವರನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ, ಪ್ರಮುಖ ಆರೋಪಿತರಾದ ನೌಷಾದ್ ಮತ್ತು ಹೈದರಾಲಿ, ಇತ್ತೀಚೆಗೆ ಕೇರಳದ ಅಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಬೈಯ್ಯುವ ವಾಟ್ಸಾಪ್ ವೈರಲ್ ವೀಡಿಯೋಗಳನ್ನು ನೋಡಿ ಪ್ರಭಾವಿತರಾಗಿದ್ದರು. ಮಂಗಳೂರಿನ ಕಾರ್ಯಕ್ರಮದ ಸಂದರ್ಭದಲ್ಲಿ ಸ್ಥಳೀಯ ಎಸ್.ಡಿ.ಪಿ.ಐ. ನಾಯಕರು ಮತ್ತು ಕಾರ್ಯಕ್ರಮದ ಆಯೋಜಕರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಮತ್ತು ಅದಕ್ಕಾಗಿ ದಾರಿಯುದ್ದಕ್ಕೂ ತಮ್ಮ ವಿರೋಧಿ ಸಂಘಟನೆಗಳ ವಿರುದ್ಧ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಬೇಕು ಎಂದು ಹೇಳಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಅಲ್ಲದೇ ನಿಮಗೆ ಏನಾದರೂ ತೊಂದರೆಯಾದಲ್ಲಿ ಎಲ್ಲಾ ರೀತಿಯ ಬೆಂಬಲವನ್ನು ನೀಡಿ, ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನಮ್ಮದು ಎಂದು ತಮ್ಮನ್ನು ಹುರಿದುಂಬಿಸಿರುವುದಾಗಿ ಪೊಲೀಸರ ಎದುರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಮಡಿವಾಳ ಪೊಲೀಸರಿಂದ ಮೂವರ ಬಂಧನ: ಆರೋಪಿ ನೌಷಾದ್ನನ್ನು ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಲು ಹೋದಾಗ ಆತನ ರೂಂನಲ್ಲಿದ್ದ ಇತರ ಮೂವರು ತಪ್ಪಿಸಿಕೊಳ್ಳಲು ಸಹಕರಿಸಿದ್ದು ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೂ ಗಾಯವಾಗಿತ್ತು. ಈ ಬಗ್ಗೆ ಬಂಧಿಸಲು ಹೋದ ಕಂಕನಾಡಿ ನಗರ ಠಾಣಾ ಪೊಲೀಸರು ಮಡಿವಾಳ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಮಡಿವಾಳ ಪೊಲೀಸರು ದ.ಕ ಜಿಲ್ಲೆಯ ವಿಟ್ಲದ ಮೊಹಮ್ಮದ್ ಯಾಸೀನ್, ಅಫ್ರೀದ್ ಸಾಗ್, ಮೊಹಮ್ಮದ್ ತುಫೇಲ್ ಎಂಬ ಮೂವರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ವಿವರಿಸಿದರು.
Discussion about this post