ತಿರುವನಂತಪುರ, ಮಾ.8: ಮಂಗಳವಾರ ಬೆಳ್ಳಂಬೆಳಗ್ಗೆ ವರ್ಕಳದಲ್ಲಿ ಎರಡು ಅಂತಸ್ತಿನ ಮನೆಗೆ ಬೆಂಕಿ ತಗುಲಿ ಎಂಟು ತಿಂಗಳ ಪುಟ್ಟ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ತರಕಾರಿ ವ್ಯಾಪಾರಿಯಾಗಿದ್ದ ಪ್ರತಾಪನ್ ಎಂಬುವವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರತಾಪನ್ (64), ಅವರ ಪತ್ನಿ ಶೆರ್ಲಿ (53), ಮಗ ಅಖಿಲ್ (25), ಸೊಸೆ ಅಭಿರಾಮಿ (24) ಮತ್ತು ಅಭಿರಾಮಿ ಅವರ ಎಂಟು ತಿಂಗಳ ಮಗು ರಾಯನ್ ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ.
ಬೆಳಗಿನ ಜಾವ 1.45ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ವೇಳೆ, ಮನೆ ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ಸ್ಥಳೀಯರು ಮನೆಮಂದಿಯನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಫೋನ್ ಕರೆಯನ್ನೂ ಮಾಡಿದರೂ, ಯಾರೂ ರಿಸೀವ್ ಮಾಡುತ್ತಿರಲಿಲ್ಲ. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ, ಸಿಬಂದಿ ಬಂದು ಮನೆಯ ಬಾಗಿಲನ್ನು ಒಡೆದು ಒಳಹೊಕ್ಕಿದ್ದಾರೆ. ಕುಟುಂಬ ಸದಸ್ಯರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಶಾರ್ಟ್ ಸರ್ಕ್ಯೂಟ್ನಿಂದ ಟಿವಿ ಹಾಲ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಗ್ನಿಶಾಮಕ ಮತ್ತು ರಕ್ಷಣಾ ತಾಂತ್ರಿಕ ನಿರ್ದೇಶಕ ಎಂ ನೌಶಾದ್ ತಿಳಿಸಿದ್ದಾರೆ. ಸರ್ಕ್ಯೂಟ್ ಬ್ರೇಕರ್ ಟ್ರಿಪ್ ಆಗಿಲ್ಲ , ವಿದ್ಯುತ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ” ಎಂದು ಅವರು ಹೇಳಿದರು.
ಎಲ್ಲಾ ಮಲಗುವ ಕೋಣೆಗಳು ಹವಾನಿಯಂತ್ರಣಗಳು, ಫಾಲ್ಸ್ ಸೀಲಿಂಗ್ ಮತ್ತು ಪರದೆಗಳನ್ನು ಹೊಂದಿದ್ದವು ಮತ್ತು ಇದು ಸನ್ನಿವೇಶವನ್ನು ಇನ್ನಷ್ಟು ಹದಗೆಡಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಹೊಗೆ ವಿಷದಿಂದ ಸಾವು ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
“ಕುಟುಂಬದ ಸದಸ್ಯರು, ತಮ್ಮ ಕೊಠಡಿಗಳಲ್ಲಿ ಸಿಲುಕಿಕೊಂಡರು ಮತ್ತು ಹೊರಬರಲು ಸಾಧ್ಯವಾಗಲಿಲ್ಲ , ಫಾಲ್ಸ್ ಸೀಲಿಂಗ್ ಮತ್ತು ಭಾರೀ ಪರದೆಗಳಿಂದಾಗಿ, ಮಲಗುವ ಕೋಣೆಗಳಲ್ಲಿ ಗಾಳಿಯ ಸಂಚಾರವು ಕಳಪೆಯಾಗಿತ್ತು. ಅಭಿರಾಮಿ ಮತ್ತು ಅವರ ಮಗು
ಸ್ನಾನಗೃಹದಲ್ಲಿ ಶವವಾಗಿ ಕಂಡುಬಂದಿದೆ. ಅವರು ಸ್ನಾನಗೃಹಕ್ಕೆ ಪ್ರವೇಶಿಸುವ ಮೂಲಕ ಹೊಗೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರು ಆದರೆ ಆ ಬಾತ್ರೂಮ್ನಲ್ಲಿ ಕಿಟಕಿ ಇರಲಿಲ್ಲ” ಎಂದು ಮೂಲಗಳು ತಿಳಿಸಿವೆ.
ಡಿಐಜಿ ಆರ್.ನಿಶಾಂತಿನಿ ನೇತೃತ್ವದಲ್ಲಿ ಪೊಲೀಸರು ಮನೆ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ತಜ್ಞರು ಕೂಡ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
Discussion about this post